Saturday, April 27, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಸಂಭ್ರಮದ ಸ್ವಾಗತ

ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಎನ್.ಚಲುವರಾಯಸ್ವಾಮಿ ಅವರಿಗೆ ಜಿಲ್ಲೆಯ ಹಲವೆಡೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ ಅವರನ್ನು ಮಂಡ್ಯ ಜಿಲ್ಲೆಯ ಗಡಿಗ್ರಾಮ ನಿಡಘಟ್ಟದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸ್ವಾಗತಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಮದ್ದೂರು ತಾಲೂಕಿನ ಪ್ರಮುಖ ಗ್ರಾಮಗಳ ವೃತ್ತಗಳಲ್ಲಿ ಹಾಗೂ ಮದ್ದೂರು ಪಟ್ಟಣದಲ್ಲಿ ಸ್ವಾಗತಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ದಿನೇಶ್‌ಗೂಳೀಗೌಡ, ಮಧುಮಾದೇಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮದಿಂದ ಕೃಷಿ ಸಚಿವರನ್ನು ಬರಮಾಡಿಕೊಂಡರು.

ಮದ್ದೂರು ಪುರಸಭೆ ಬಳಿ ಪುರಸಭೆ ಆಡಳಿತದ ವತಿಯಿಂದ ಕೃಷಿ ಸಚಿವರನ್ನು ಅಭಿನಂದಿಸಿ ಸ್ವಾಗತಿಸಲಾಯಿತು.
ಜಿಲ್ಲಾ ಹಾಲು ಒಕ್ಕೂಟದ ಬಳಿ ಪ್ರಭಾರ ಅಧ್ಯಕ್ಷ ರಘುನಂದನ್ ನೇತೃತ್ವದಲ್ಲಿ ಹಾಲು ಒಕ್ಕೂಟದ ನಿರ್ದೇಶಕರಾದ ಬೋರೇಗೌಡ ಯು.ಸಿ.ಶಿವಕುಮಾರ್, ಕಾಡೇನಹಳ್ಳಿ ರಾಮಚಂದ್ರು ಹಾಗೂ ಅಧಿಕಾರಿ ವರ್ಗ ನೂತನ ಸಚಿವರನ್ನು ಸ್ವಾಗತಿಸಿತು.

ಕೆ.ಆರ್.ಪೇಟೆ ತಾಲೂಕಿನ ವಿವಿಧ ಮುಖಂಡರು ಮಂಡ್ಯ ತಾಲ್ಲೂಕಿನ ಸ್ಯಾಂಜೋ ಆಸ್ಪತ್ರೆ ಬಳಿ ನೂತನ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗರವರುಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು, ಮುಖಂಡ ವಿಜಯರಾಮೇಗೌಡ ಇತರರಿದ್ದರು.

ಮಂಡ್ಯ ನಗರದ ರೈಲ್ವೆ ನಿಲ್ದಾಣ ಎದುರು ಉದ್ಯಮಿ ರವಿ ಭೋಜೇಗೌಡ ಅವರು ಚಲುವರಾಯಸ್ವಾಮಿ ಅವರಿಗೆ ಕ್ರೇನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪುಷ ವೃಷ್ಟಿಗೈದು ಅಭಿಮಾನ ಮೆರೆದರು.

ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜು, ಉದ್ಯಮಿ ರವಿ ಬೋಜೇಗೌಡ, ಬಿ.ರೇವಣ್ಣ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್‌ಕುಮಾರ್ ನೇತೃತ್ವದಲ್ಲಿ ಕೃಷಿ ಸಚಿವರನ್ನು ಸ್ವಾಗತಿಸಲಾಯಿತು.

ಮಂಡ್ಯ ತಾಲೂಕಿನ ಹನೆಕೆರೆ, ಬೂದನೂರು, ಉಮಡಹಳ್ಳಿ ವೃತ್ತ, ಮಂಡ್ಯ ನಗರದ ಗಡಿಗ್ರಾಮ, ಸ್ವರ್ಣಸಂದ್ರ, ಸಕ್ಕರೆ ವೃತ್ತ, ನಂದ ವೃತ್ತ, ವಿವೇಕಾನಂದ ವೃತ್ತ, ಮಹಾವೀರ ವೃತ್ತಗಳಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಹಾಗೂ ಕಾರ್ಯಕರ್ತರು ನೂತನ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಬೆಂಬಲಿಗರು ಸಹ ನಗರದ ವಿವಿಧ ವೃತ್ತಗಳಲ್ಲಿ ನೂತನ ಸಚಿವರನ್ನು ಸ್ವಾಗತಿಸಿದರು. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನ ಕೃಷಿ ಸಚಿವರು ಹಾಗೂ ಜಿಲ್ಲೆಯ ಶಾಸಕರುಗಳ ಫ್ಲೆಕ್ಸ್ ರಾರಾಜಿಸುತ್ತಿದ್ದವು. ಪೈಪೋಟಿಗೆ ಬಿದ್ದವರಂತೆ ಕಾಂಗ್ರೆಸ್ ಮುಖಂಡರು ಮಂಡ್ಯ ನಗರ ವ್ಯಾಪ್ತಿಯಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಸಿ ನೂತನ ಸಚಿವರ ಸ್ವಾಗತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಸಿಲ್ವರ್ ಜ್ಯೂಬ್ಲಿ ಪಾರ್ಕ್ನಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ನೂತನ ಸಚಿವ ಹಾಗೂ ಶಾಸಕರನ್ನು ಅಭಿನಂದಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!