ಇತ್ತೀಚಿಗೆ ಕೇಸರಿಕರಣದ ಕಲೆಯೂ ಎಲ್ಲಾ ಕ್ಷೇತ್ರಗಳಿಗೂ ಪ್ರವೇಶ ಮಾಡಿದೆ. ಈಗ ಅದು ಗಾಂಧಿ ಪ್ರತಿಮೆಯನ್ನೂ ಬಿಟ್ಟಿಲ್ಲ. ನಮ್ಮ ಪಕ್ಕದ ಜಿಲ್ಲೆಯಾದ ಹಾಸನದಲ್ಲಿ ಗಾಂಧಿ ಭವನ ಉದ್ಘಾಟನೆಗೆ ತಯಾರಾಗಿದೆ. ಅಲ್ಲಿ ಗಾಂಧಿ ಹಾಗೂ ಅವರ ಸಂಗಾತಿಗಳ ಆಕೃತಿಗಳು ಎದ್ದು ನಿಂತಿವೆ. ಅವುಗಳನ್ನು ಒಮ್ಮೆ ನೋಡಿದರೆ ನೀವು ಬೆಚ್ಚಿ ಬೀಳುವುದಂತೂ ಗ್ಯಾರಂಟಿ.
ಕಳೆದ ಎರಡು ಮೂರು ದಿನಗಳಿಂದ ಈ ವಿಗ್ರಹಗಳನ್ನು ನೋಡಿದವರೆಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಗಾಂಧಿಯಂತೂ ‘ಬಾಡಿ ಬಿಲ್ಡರ್’ ತರಹ ಕಾಣ್ತಾರೆ. ಅವರ ದೇಹ ಹಾಗೂ ರುಂಡಕ್ಕೂ ಸಂಬಂಧವೇ ಇಲ್ಲ. ಉಳಿದ ಶಿಲ್ಪಗಳಲ್ಲಿ ಕೆಲವರಂತೂ ಅಂಗ ಊನ ಆದವರಂತೆ ಕಾಣುತ್ತಾರೆ. ದೇಹದ ಅಂಗರಚನೆ ಮೂಲ ಪಾಠಗಳನ್ನೇ ಧಿಕ್ಕರಿಸಿ ಕೆತ್ತನೆ ಮಾಡಿದ್ದಾರೆ.
ಇತ್ತೀಚೆಗೆ ಶ್ರೀರಾಮ, ಆಂಜನೇಯ ಸೇರಿದಂತೆ ಇತರ ಹಿಂದೂ ದೇವರ ವಿಗ್ರಹಗಳನ್ನು ಉತ್ತಮ ದೇಹದಾರ್ಢ್ಯ ಹೊಂದಿರುವವರಂತೆ ಚಿತ್ರಿಸುವ ಗೀಳು ಅಲ್ಲಲ್ಲಿ ಕಂಡು ಬರುತ್ತಿದೆ. ಅದರಂತೆ ಗಾಂಧಿ ಅವರ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ ಎಂದು ಅಪ್ಪಟ ಗಾಂಧಿವಾದಿಗಳು ಆರೋಪಿಸಿದ್ದಾರೆ.
ಗಾಂಧಿಯವರು ಸಸ್ಯಹಾರಿಗಳಾಗಿದ್ದು, ಕೃಶವಾದ ಶರೀರ ಹೊಂದಿದವರಾಗಿದ್ದರು. ಅಂತಹ ಸಾತ್ವಿಕ ಗುಣವುಳ್ಳ ವ್ಯಕ್ತಿಯನ್ನು ಕುಸ್ತಿಪಟುವಿನಂತೆ ಚಿತ್ರಿಸಿರುವುದು ಗಾಂಧಿ ಅವರ ವ್ಯಕ್ತಿತ್ವವನ್ನು ಅವಮಾನಿಸಿದಂತಾಗಿದೆ ಎಂದು ಗಾಂಧಿ ಅನುಯಾಯಿಗಳು ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ ಗಾಂಧಿ ಪ್ರತಿಮೆ ತಯಾರಿಕೆಯ ಕೌಶಲ್ಯವಿಲ್ಲದವರಿಗೆ ಪ್ರತಿಮೆ ನಿರ್ಮಾಣ ಮಾಡಲು ಅವಕಾಶ ನೀಡಲಾಗಿತ್ತೆ ? ಅಥವಾ ಬಿಜೆಪಿ ಸರ್ಕಾರದ 40 % ಕಮಿಷನ್ ದಂಧೆ ಈ ವಿಗ್ರಹ ಕಾಮಗಾರಿಯಲ್ಲೂ ನಡೆದಿರಬಹುದೆ ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶಿಲ್ಪಕಲೆಗೆ ಜಗತ್ತಿನಾದ್ಯಂತ ಹೆಸರಾಗಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹೊಂದಿರುವ ಈ ಜಿಲ್ಲೆಯಲ್ಲಿ ಕಲೆಗೆ ಈ ಗತಿಯೇ ಎಂದು ಹಿರಿಯ ಕಲಾವಿದರು ಟೀಕೆ ಮಾಡಿದ್ದಾರೆ. ಹಾಸನದಲ್ಲಿ ಗಾಂಧಿ ಭವನದ ಉದ್ಘಾಟನೆ ನಾಳೆಗೆ ನಿಗದಿಯಾಗಿತ್ತು. ಆದರೆ ಗಾಂಧಿ ಹಾಗೂ ಇತರೆ ವ್ಯಕ್ತಿಗಳ ಪ್ರತಿಮೆಗಳನ್ನು ವಿಕೃತವಾಗಿ ಚಿತ್ರಿಸಿರುವುದನ್ನು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ರದ್ದಾಗಿದೆ. ಭವನದ ಆವರಣದಲ್ಲಿ ಇರುವ ಗಾಂಧಿ ಹಾಗೂ ಇತರರ ವಿಗ್ರಹಗಳ ಬಗ್ಗೆ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ ನಂತರ ಸರಕಾರ ಈ ನಿರ್ಧಾರ ತೆಗದುಕೊಂಡಿದೆ.