ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಆರ್ಎಪಿಸಿಎಂಎಸ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೇಮಲತಾ ಬಸವರಾಜು ಅತ್ಯಧಿಕ ಮತಗಳಿಸಿ ಚುನಾಯಿತರಾಗಿದ್ದು ಬಿಜೆಪಿ ಪಕ್ಷದ ಸಂಘಟನೆಗೆ ಸ್ಫೂರ್ತಿ ತಂದಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.
ಜಯ ಗಳಿಸಿದ ಕೆ.ಹೇಮಲತಾ ಬಸವರಾಜು ಅವರನ್ನು ಪಕ್ಷದ ಕಚೇರಿಯಲ್ಲಿ ಅಭಿನಂದಿಸಿ ಮಾತನಾಡಿದ ಅವರು,ಅವರ ಗೆಲುವಿಗೆ ಸಹಕರಿಸಿದ ಎಲ್ಲ ಮತದಾರರು ಹಾಗೂ ಮುಖಂಡರಿಗೆ ಪಕ್ಷದ ವತಿಯಿಂದ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಒಂದು ನಿರ್ದೇಶಕ ಸ್ಥಾನಕ್ಕೆ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಲಾಗಿತ್ತು.21 ಸ್ಪರ್ಧಾಳುಗಳ ಪೈಕಿ ಅತಿ ಹೆಚ್ಚು ಮತ (1054) ಪಡೆದು ಹೇಮಲತಾ ಅವರು ಚುನಾಯಿತರಾಗಿದ್ದಾರೆ. ಈ ಹಿಂದೆ ತಾ.ಪಂ. ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಧ್ಯಕ್ಷ ಗಾದಿಯ ಅವಕಾಶ ಲಭಿಸಿದರೆ ಸಮರ್ಥವಾಗಿ ನಿಭಾಯಿಸುವ ಅರ್ಹತೆ ಹೊಂದಿದ್ದಾರೆ ಎಂದರು.
ಪಕ್ಷದ ರಾಜ್ಯ ವರಿಷ್ಠರು, ಜಿಲ್ಲಾ ಸಚಿವರು ಹಾಗೂ ಕ್ರೀಡಾ ಸಚಿವರು ಕೈಗೊಳ್ಳುವ ತೀರ್ಮಾನದಂತೆ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತ ಚಲಾಯಿಸಲಾಗುವುದು ಎಂದು ತಿಳಿಸಿದರು.
ವಿಜೇತ ಅಭ್ಯರ್ಥಿ ಹೇಮಲತಾ ಮಾತನಾಡಿ, ನನ್ನ ಗೆಲುವಿಗೆ ಶ್ರಮಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಷ್ಠಿತ ಸಹಕಾರಿ ಸಂಸ್ಥೆಯ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿಯಲು ಮುಂದಾಗುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ನಗರಾಧ್ಯಕ್ಷ ವಿವೇಕ್, ಸಿ.ಟಿ.ಮಂಜುನಾಥ್ ಹಾಗೂ ಅಶೋಕ್ ಪಟೇಲ್ ಇತರರಿದ್ದರು.