ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಬಳಿಯ ಹೇಮಾವತಿ ನದಿಯಲ್ಲಿ ಪ್ರವಾಹ ಹೆಚ್ಚಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕುರಿ ಮೇಯಿಸಲು ನದಿ ಮಧ್ಯೆದ ದ್ವೀಪಕ್ಕೆ ತೆರಳಿದ್ದ, 10 ಮಂದಿ ಕುರಿಗಾಯಿಗಳ ಸಹಿತ 900 ಕುರಿಗಳು ಜಲದಿಗ್ಬಂಧನದಿಂದ ಬಂಧಿಸಲ್ಪಟ್ಟಿವೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ದಸೂಡಿ ಪಕ್ಕದ ಕರೆಬಲಾಯ್ಯನಹಟ್ಟಿಯ ನಿವಾಸಿ ತಿಮ್ಮಯ್ಯ, ಚಿತ್ರದೇವರಹಟ್ಟಿ ಗಂಗಣ್ಣ ಅವರ 2 ಕುಟುಂಬದ 10 ಮಂದಿ ಸದಸ್ಯರು ನೀರಿನ ಮಧ್ಯೆ ಸಿಲುಕಿಕೊಂಡು ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿದಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿ ಹೆಬ್ಬಾಳುವಿನಿಂದ 1 ಕಿ.ಮೀ. ದೂರದ 300 ಎಕರೆ ವಿಸ್ತೀರ್ಣದ ಈ ದ್ವೀಪದ ಮಧ್ಯೆ ಸಿಲುಕಿರುವ ಕುರಿಗಾಯಿಗಳನ್ನು ಅಧಿಕಾರಿಗಳು ದ್ವೀಪದಿಂದ ಹೊರ ಬರುವಂತೆ ಮನವೊಲಿಸಿದರೂ ಕುರಿಗಳನ್ನು ಬಿಟ್ಟು, ನಾವು ಹೊರಗೆ ಬರುವುದಿಲ್ಲ ಎಂದು ಅವರು ಪಟ್ಟು ಹಿಡಿದಿರುವುದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ವಿಶಾಲವಾದ ಈ ದ್ವೀಪದಲ್ಲಿ ಕುರಿಗಳಿಗೆ ಮೇವು ಜಾಸ್ತಿ ಇರುವುದರಿಂದ ಪ್ರತಿ ವರ್ಷ ಅಲ್ಲಿಗೆ ಹೋಗಿ 10 ರಿಂದ 15 ದಿವಸ ಕುರಿಗಳನ್ನು ಮೇಯಿಸಿಕೊಂಡು ವಾಪಸ್ಸು ಹೋಗುವುದು ವಾಡಿಕೆಯಾಗಿತ್ತು. ಅದರಂತೆ ಕಳೆದ 15ಗಳ ಹಿಂದೆ ದ್ವೀಪಕ್ಕೆ ಕುರಿಗಳನ್ನು ಮೇಯಿಸಲು ಹೋಗಿದ್ದರು. ಆದರೆ ನಿನ್ನೆ ರಾತ್ರಿವೇಳೆ ಹೇಮಾವತಿ ನದಿಯಲ್ಲಿ ನೀರು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದೆ, ಆದ್ದರಿಂದ ಕುರಿಗಾಯಿಗಳಾಗಲಿ, ಕುರಿಗಳಾಗಲಿ ದ್ವೀಪದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ, ನದಿಯ ನೀರು ಜಾಸ್ತಿಯಾಗಿ ಅಪಾಯ ಮಟ್ಟವನ್ನು ತಲುಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ
ವಿಷಯ ತಿಳಿದ ಕೂಡಲೇ ತಹಸೀಲ್ದಾರ್ ಎಂ.ವಿ.ರೂಪಾ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಕುರಿಗಾಯಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಅವರನ್ನು, ಸುರಕ್ಷಿತವಾಗಿ ಹೊರಗೆ ಕರೆತರಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ.