ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕರ್ನಾಟಕದ ಚುನಾವಣೆ ಗೆಲುವಿಗೂ ದಿಕ್ಸೂಚಿ ಆಗಲಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ.ಎಚ್.ಕೃಷ್ಣ ಹೇಳಿದರು.
ಮಂಡ್ಯ ನಗರದ ಅರ್ಕೇಶ್ವರ ನಗರದಲ್ಲಿರುವ ಮಹರ್ಷಿ ಶಾಲಾ ಆವರಣದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ.ಎಚ್.ಕೃಷ್ಣ ಆಯೋಜಿಸಿದ್ದ ಕ್ಷೇತ್ರ ವ್ಯಾಪ್ತಿಯ ಜನತೆಗೆ ಉಚಿತವಾಗಿ ಶ್ರೀ ಮಲೆ ಮಹದೇಶ್ವರ ಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಗೆಲುವು ದೇಶದ ಕಾಂಗ್ರೆಸ್ಸಿಗರಿಗೆ ಹೊಸ ಚೈತನ್ಯ ನೀಡಲಿದೆ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂಬ ದಿಕ್ಸೂಚಿಯನ್ನು ತಿಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇಂದು ಎಐಸಿಸಿ ವರಿಷ್ಠೆ ಸೋನಿಯಾಗಾಂಧಿ ಅವರ ಜನ್ಮದಿನವಾಗಿದ್ದು, ಅದರ ಪ್ರಯುಕ್ತ ಜನತೆಗೆ ದೇವರ ದರ್ಶನ ಮಾಡಿಸಿ, ಅವರಿಂದ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಸೋನಿಯಾಗಾಂಧಿ ಅವರ ಆಯಸ್ಸು, ಆರೋಗ್ಯ ವೃದ್ಧಿಗಾಗಿ ನಾವು ವಿಶೇಷ ಪೂಜೆ, ಪ್ರಾರ್ಥನೆ ಮಾಡಿಸುತ್ತಿದ್ದೇವೆ ಎಂದು ನುಡಿದರು.
5 ಸಾರಿಗೆ ಬಸ್ ಗಳಲ್ಲಿ 280ಕ್ಕೂ ಹೆಚ್ಚು ಜನರು ಯಾತ್ರೆಗೆ ತೆರಳುತ್ತಿದ್ದು, ಇಂದಿನ ಮಲೆ ಮಹದೇಶ್ವರ ಯಾತ್ರೆಗೆ ಕೆರಗೋಡು ಹೋಬಳಿಯ ಪಂಚೆಗೌಡನ ದೊಡ್ಡಿ, ಬೆಳ್ಳುಂಡಗೆರೆ, ಕೆರಗೋಡು, ಸ್ವರ್ಣಸಂದ್ರ ಬಡಾವಣೆಯ ನಿವಾಸಿಗಳು ತೆರಳುತ್ತಿದ್ದಾರೆಂದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಹೇಮಲತಾ ಮುಖಂಡರಾದ ಕಿಟ್ಟಿ, ಮುರುಳಿ, ಸಂಜಯ್, ಸೋಮಶೇಖರ್ ಸ್ವರ್ಣಸಂದ್ರ ಹಲವರು ಇದ್ದರು