ಚಾಮುಂಡಿ ತಾಯಿಯ ಆಣೆ ಮಾಡಿ ಹೇಳುತ್ತೇನೆ, ನನ್ನ ಮಗ ಅಭಿಷೇಕ್ ಅಂಬರೀಶ್ ಗೆ ಟಿಕೆಟ್ ಕೊಡಿ ಎಂದು ನಾನು ಯಾರ ಬಳಿಯೂ ಕೇಳಿಲ್ಲ. ಹಂಗೇನಾದರೂ ಕೇಳಿದ್ದರೆ ನಾನು ಅಂಬರೀಶ್ ರವರ ಪತ್ನಿಯಾಗಲು ಲಾಯಕ್ಕದವಳಲ್ಲ, ನಾನು ರಾಜಕಾರಣದಲ್ಲಿರುವವರೆಗೆ ನನ್ನ ಮಗ ಅಭಿಷೇಕ್ ಅಂಬರೀಶ್ ಸ್ಪರ್ಧೆ ಮಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.
ಮಂಡ್ಯದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಎಂದಿಗೂ ಕುಟುಂಬ ರಾಜಕಾರಣ ಮಾಡುವುದಿಲ್ಲ. ಅಭಿಷೇಕ್ ಅಂಬರೀಶ್ ಗೆ ಎರಡು ಪಕ್ಷಗಳಿಂದ ಸ್ಪರ್ಧೆ ಮಾಡಲು ಅವಕಾಶ ಇತ್ತು. ಆಗ ಅಭಿಷೇಕ್ ನನ್ನ ತಾಯಿ ತುಂಬಾ ಚೆನ್ನಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ನನಗೆ ಈಗ ರಾಜಕೀಯ ಬೇಡ ಎಂದು ಹೇಳಿದ್ದಾನೆ. ಒಬ್ಬರು ರಾಜಕಾರಣದಲ್ಲಿ ಇರಬೇಕಾದರೆ ಮತ್ತೊಬ್ಬರು ಬರಬಾರದು ಅನ್ನುವುದು ನನ್ನ ಸಿದ್ಧಾಂತ.ಆದರೆ ನಮ್ಮಲ್ಲಿ ಸಾಲು ಸಾಲಾಗಿ ಒಂದೇ ಕುಟುಂಬದವರು ರಾಜಕಾರಣ ಮಾಡುವುದನ್ನು ನೋಡುತ್ತಿದ್ದೇವೆ. ರಾಜಕಾರಣದಲ್ಲಿ ನಾನಿರುವವರೆಗೂ ಅಭಿಷೇಕ್ ರಾಜಕಾರಣಕ್ಕೆ ಬರಲು ನಾನು ಅವಕಾಶ ಕೊಡುವುದಿಲ್ಲ. ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾವನ್ನು ಕೂಡ ಬೇರೆಯವರೇ ನಿರ್ಮಾಣ ಮಾಡಿದರು. ನಾವು ನಮ್ಮ ಬ್ಯಾನರ್ ದಿಂದ ಆತನನ್ನು ತೆರೆಗೆ ತರಲಿಲ್ಲ. ಆತ ಇನ್ನಷ್ಟು ಸಿನಿಮಾಗಳನ್ನು ಮಾಡಲಿ ಎಂದರು.
ನಾನು ನನ್ನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿಲ್ಲ. ನನ್ನ ಭವಿಷ್ಯಕ್ಕಿಂತ ನನ್ನನ್ನು ನಂಬಿರುವ ಅಂಬರೀಶ್ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಹಿತವೇ ನನಗೆ ಮುಖ್ಯ.ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡುವ ಆಶ್ವಾಸನೆ ಕೊಡುವ ನಾಯಕರು ನಮಗೆ ಬೇಕಾಗಿದೆ. ಅದಕ್ಕಾಗಿ ನರೇಂದ್ರ ಮೋದಿಯವರ ಜೊತೆ ಹೋಗಲು ನಿರ್ಧರಿಸಿದ್ದೇನೆ. ನಾನು ಗೆದ್ದ ಆರು ತಿಂಗಳ ನಂತರವೇ ಬಿಜೆಪಿ ಪಕ್ಷ ಸೇರಬಹುದಿತ್ತು.ಆದರೆ ನಾನು ನಾಲ್ಕು ವರ್ಷಗಳ ನಂತರ ಬೆಂಬಲ ನೀಡುತ್ತಿದ್ದೇನೆ. ಇದು ನನ್ನ ಭವಿಷ್ಯಕ್ಕಾಗಿ ಅಲ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಎಂದರು.
ಅಭಿವೃದ್ಧಿಗೆ ವೇಗ
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿದೆ ಎಂಬುದನ್ನು ನಾನು ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದೇನೆ. ಮಾರ್ಚ್ 12ರಂದು ಮಂಡ್ಯಕ್ಕೆ ಆಗಮಿಸುವ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಹಲವು ವಿಚಾರಗಳನ್ನು ತಿಳಿಸುತ್ತಿದ್ದೇನೆ. ಒಟ್ಟಾರೆ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನಗೆ ಮುಖ್ಯ ಎಂದರು