ಸಂವಿಧಾನವೇ ನಮ್ಮ ನಿಜವಾದ ದೇವರು, ಏಕೆಂದರೆ ಎಲ್ಲರನ್ನೂ ಸಮಾನವಾಗಿ ನೋಡುವುದು ನಮ್ಮ ಸಂವಿಧಾನ ಮಾತ್ರ. ಆದರೆ ಇಂದಿಗೂ ಕೆಲ ದೇವಾಲಯಗಳಿಗೆ ಜಾತಿಯ ಕಾರಣಕ್ಕಾಗಿ ವ್ಯಕ್ತಿಗಳಿಗೆ ಪ್ರವೇಶ ನೀಡುತ್ತಿಲ್ಲ, ದೇವರು ಇದ್ಧಾನೋ ಇಲ್ಲವೋ ಗೊತ್ತಿಲ್ಲ, ಆದರೆ ಮನುಷ್ಯ ಪ್ರೀತಿ ಸತ್ತೋಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಡ್ಯ, ನೆಹರು ಯುವ ಕೇಂದ್ರ ಮುಂತಾದ ಇಲಾಖೆಗಳ ಸಹಯೋಗದಲ್ಲಿ ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷಗಳು ಕಳೆದರೂ ಮಹಿಳೆಯರಿಗೆ ಸಮಾನತೆ ಸಿಕ್ಕಿದೇಯೇ ? ಮಹಿಳೆಯರನ್ನು 2ನೇ ದರ್ಜೆ ನಾಗರೀಕರಂತೆ ಕಾಣಲಾಗುತ್ತಿದೆ. ಇನ್ನೂ ದಲಿತರನ್ನು ಕೆಳ ಜಾತಿ ಕಾರಣಕ್ಕಾಗಿ ದೇವಾಲಯಗಳಿಗೆ ಬಿಟ್ಟುಕೊಳ್ಳುತ್ತಿಲ್ಲ, ಕಟಿಂಗ್, ಸೇವಿಂಗ್ ಮಾಡುತ್ತಿಲ್ಲ, ನಾವೆಲ್ಲಾ ಯಾವ ಕಾಲದಲ್ಲಿದ್ದೇವೆ. ಇಂದು ಮನುಷ್ಯ ಪ್ರೀತಿ, ಭಾತೃತ್ವ ಮರೆಯಾಗುತ್ತಿದೆ ಆತಂಕ ವ್ಯಕ್ತಪಡಿಸಿದರು.
ಸಂವಿಧಾನವೆಂದರೆ ತಾಯಿ. ತಾಯಿ ತನ್ನ ಮಕ್ಕಳನ್ನು ತಾರತಮ್ಯದಿಂದ ನೋಡುವುದಿಲ್ಲ, ಎಲ್ಲಾ ಮಕ್ಕಳನ್ನು ಸಮಾನವಾಗಿ ನೋಡುತ್ತಾರೆ, ಅವರು ಕಪ್ಪಿರಲಿ. ಬಿಳುಪಿರಲಿ, ಕುರುಡರಿರಲಿ, ಕುಂಟರಿರಲಿ ಹಾಗೇಯೇ ನಾವು ಸಮಾಜದಲ್ಲ ಎಲ್ಲಾ ಜನರಿಗೂ ಸಮಾನವಾದ ಅವಕಾಶ ದೊರಕಿಸಿ ಕೊಡಲು ಮುಂದಾಗಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣ ಮಾಡಿಸಲಾಯಿತು.