ಮೈಸೂರು ಅರಸರ ನಂತರ ಮಂಡ್ಯಕ್ಕೆ ಹೊಸ ಸಕ್ಕರೆ ಕಾರ್ಖಾನೆ ಕೊಟ್ಟವರು ರಾಜ್ಯದ ಜನಪ್ರಿಯ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.
ಮಳವಳ್ಳಿಯಲ್ಲಿ ಇಂದು ನಡೆದ ಗ್ಯಾರಂಟಿ ಯೋಜನೆಗಳ ಬೃಹತ್ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನ ಕೆಲವು ಮಂಡ್ಯ ವಿರೋಧಿ ಅಂತಾರೆ. ಅವರಿಗೆ ಬೀದರ್, ಮಂಡ್ಯ, ಮೈಸೂರು ಭೇದ ಗೊತ್ತಿಲ್ಲ. ರಾಜ್ಯದ 7 ಕೋಟಿ ಜನರ ಮುಖದಲ್ಲಿ ನಗು ತರಿಸಿದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯ ಮಾತ್ರ ಎಂದರು.
ಮೋದಿಗೆ ಪೈಪೋಟಿ ಕೊಡಬಲ್ಲ ನಾಯಕ
ಇತಿಹಾಸದಲ್ಲಿ ಯಶಸ್ವಿಯಾಗಿ ಸಾರ್ವಜನಿಕ ಕಾರ್ಯಕ್ರಮ ಕೊಟ್ಟ ಸರ್ಕಾರವೆಂದರೆ ಕಾಂಗ್ರೆಸ್ ಸರ್ಕಾರ. ನಮ್ಮ ಗ್ಯಾರಂಟಿಯನ್ನೇ ಅವರ ಗ್ಯಾರಂಟಿಯಾಗಿ ಪರಿವರ್ತನೆ ಮಾಡಲು ಮೋದಿ ಹೊರಟಿದ್ದಾರೆ. ಮೋದಿಗೆ ಆಡಳಿತದಲ್ಲಿ ಸರಿಸಮನಾಗಿ ಪೈಪೋಟಿ ಕೊಡಬಲ್ಲ ನಾಯಕನೆಂದರೆ ಸಿದ್ದರಾಮಯ್ಯ ಮಾತ್ರ ಎಂದು ನುಡಿದರು.
ಹಲವು ರಾಜ್ಯಗಳು ಸಿದ್ದರಾಮಯ್ಯ ಆಡಳಿತದ ಬಗ್ಗೆ ಪ್ರಶಂಸೆ ಮಾಡಿವೆ. ರೈತರ ನೆಮ್ಮದಿ ಜೀವನಕ್ಕಾಗಿ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಾರೆ, ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆ ಇಲ್ಲ. ನೀರಾವರಿಗೆ ಬಜೆಟ್ನಲ್ಲಿ ಸಾಕಷ್ಟು ಯೋಜನೆ ಮೀಸಲಿಡಲಾಗಿದೆ. ಸಾರ್ವಜನಿಕ ಬಜೆಟ್ ಧಿಕ್ಕರಿಸಿದ ಏಕೈಕ ಪಕ್ಷ ಬಿಜೆಪಿ. ಅವರಿಗೆ ಜನರ ಒಳಿತು ಬೇಕಿಲ್ಲ, ನಮ್ಮನ್ನ ವಿರೋಧಿಸುವುದಷ್ಟೇ ಕೆಲಸ ಎಂದು ಛೇಡಿಸಿದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಡಿಕೆಶಿ-ಸಿದ್ದರಾಮಯ್ಯ ಕಿತ್ತಾಡುತ್ತಾರೆ ಎಂದ್ರು. ಅದ್ಯಾವುದು ಆಗಲಿಲ್ಲ, ಒಗ್ಗಟ್ಟಿನಿಂದ ಸರ್ಕಾರ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯನ್ನು ಜೊತೆಯಾಗೆ ಕೆಲಸ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿಗಳಿಗೆ ₹ 57,000 ಕೋಟಿ ಮೀಸಲು
ಇತಿಹಾಸದಲ್ಲಿ 77 ವರ್ಷಗಳ ನಂತರ ರಾಜ್ಯದ ಸಾರ್ವಜನಿಕರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿಗಳಿಗೆ 57,000 ಕೋಟಿ ರೂ ಗಳನ್ನು ಆಯವ್ಯಯದಲ್ಲಿ ರಾಜ್ಯ ಸರ್ಕಾರ ಮೀಸಲಿರಿಸಿದೆ ಎಂದರು.
ರೈತರ ಸಾಲ ಮನ್ನ ಮಾಡಿದರೆ 15 ರಿಂದ 20 ಸಾವಿರ ಕೋಟಿ ರೂ ಬೇಕಾಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 50,000 ಕೋಟಿ ರೂ ವೆಚ್ಚದಂತೆ, 5 ವರ್ಷಕ್ಕೆ 2,50,000 ಕೋಟಿ ರೂ ವೆಚ್ಚವಾಗಲಿದೆ. ಇದರಿಂದ ಅರ್ಹ ಕುಟುಂಬಗಳಿಗೆ ಪ್ರತಿ ಮಾಹೆ ಸಿಗಲಿದೆ. ಈ ಅನುದಾನ ರಾಜ್ಯದ ಜನತೆಯನ್ನು ಸಬಲೀಕರಣಗೊಳಿಸಲಿದೆ ಎಂದರು.
ಮಂಡ್ಯ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರವು ಜನಸಾಮಾನ್ಯರಿಗೆ ಸಹಾಯಧನವಾಗಿ ಸಾಲ, ಸಬ್ಸಿಡಿ ನೀಡುವುದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ, ಹೈನುಗಾರಿಕೆ ಇನ್ನಿತರೆ 95,000 ಕೋಟಿ ರೂ ಹಣ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರದ 2024 ರ ಬಜೆಟ್ನಲ್ಲಿ 70% ಕೃಷಿಕರಿಗೆ ಹೆಚ್ಚಿನ ಗಮನವನ್ನು ಹರಿಸಲಾಗಿದ್ದು, ವಿ. ಸಿ ಫಾರಂನಲ್ಲಿ ಕೃಷಿ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು. ಜಿಲ್ಲೆಯಲ್ಲಿ 500 ಕೋಟಿ ರೂ ಅನುದಾನದಲ್ಲಿ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡಲು ಚಿಂತಿಸಲಾಗುತ್ತಿದೆ ಎಂದರು.
ಕೆ ಆರ್ ಎಸ್ ಅಣೆಕಟ್ಟು, ಕಾವೇರಿ ನೀರಾವರಿ ಹಾಗೂ ಮಳವಳ್ಳಿ ತಾಲ್ಲೂಕಿನ ಮಾಧವ ನಾಲೆ ಮತ್ತು ಕೆಮ್ಮಣ್ಣು ನಾಲೆ ಆಧುನೀಕರಣ ಮಾಡಲಾಗುವುದು ಎಂದರು.