ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ವರ್ತನೆ ಖಂಡಿಸಿ ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಯಾಗಿರುವುದಾಗಿ ತಾ.ಪ.ಮಾಜಿ ಸದಸ್ಯ ದೊಡ್ಡಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯದವನಾದ ನಾನು ತಾ.ಪಂ.ಸದಸ್ಯನಾಗಿ ಆಯ್ಕೆಯಾದರೂ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಿಲ್ಲ, ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿದ ನರೇಂದ್ರಸ್ವಾಮಿ ಅವರಿಗೆ ಬಿ.ಫಾರಂ ನೀಡಬಾರದೆಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದಾಗ ಅವರಿಂದಾದ ಅವಮಾನ ಸಹಿಸದೇ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದೇನೆಂದು ತಿಳಿಸಿದರು.
ಜಿ.ಪಂ.ಮಾಜಿ ಸದಸ್ಯ ಎಂ.ದೊಡ್ಡಯ್ಯ ಮಾತನಾಡಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಪುಟ್ಟರಾಮು ಅವರ ಒಡನಾಡಿಯಾಗಿದ್ದ ಹಿನ್ನೆಲೆಯಲ್ಲಿ ನರೇಂದ್ರಸ್ವಾಮಿ ಅವರು ನನ್ನನ್ನು ನಿರ್ಲಕ್ಷಿಸಿದರು. ನಿರ್ಲಕ್ಷ್ಯದಿಂದ ಮನನೊಂದು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದೇನೆಂದರು.
ಜಿ.ಪಂ.ಮಾಜಿ ಸದಸ್ಯ ಚೊಟ್ಟನಹಳ್ಳಿ ಸತೀಶ್ ಮಾತನಾಡಿ, ಹೆಚ್.ಡಿ.ಕುಮಾರಸ್ವಾಮಿ ಅವರ ಸಹೃದಯತೆ ಹಾಗೂ ಸರಳತೆಗೆ ತಲೆ ಬಾಗಿ ಮಾತೃ ಪಕ್ಷವಾದ ಜೆಡಿಎಸ್ ಗೆ ಮರಳಿ ಸೇರ್ಪಡೆಯಾಗಿದ್ದೇನೆ, ಸ್ನೇಹಜೀವಿಯಾಗಿರುವ ಶಾಸಕ ಅನ್ನದಾನಿ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇವೆಂದರು.
ಗೋಷ್ಠಿಯಲ್ಲಿ ಬಸವರಾಜು, ಉಮೇಶ್, ಮಾರೇಹಳ್ಳಿ ಕಿಟ್ಟಿ, ಮದ್ದುಂ ಪಾಷ, ಅನಿತಾ ಉಪಸ್ಥಿತರಿದ್ದರು.