ದೆಹಲಿಯ ಯುವತಿ ಶ್ರದ್ಧಾಳ ಕೊಲೆ ಪ್ರಕರಣವು ಇನ್ನೂ ದೇಶದೆಲ್ಲೆಡೆ ಚರ್ಚೆಯಲ್ಲಿರುವಾಗಲೇ ರಾಜಸ್ಥಾನದಲ್ಲೊಂದು ಆಘಾತಕಾರಿ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ.
‘ಮರ್ಯಾದಾಗೇಡು ಹತ್ಯೆ’ ಎಂದು ರಾಜಸ್ಥಾನ ಪೊಲೀಸರು ಶಂಕಿಸಿದ್ದ ಜೋಡಿಯೊಂದರ ಕೊಲೆ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೂಜಾರಿಯೊಬ್ಬನನ್ನು ಬಂಧಿಸಿದ್ದಾರೆ.
ವಿವಾಹೇತರ ಸಂಬಂಧ ಹೊಂದಿದ್ದ ಜೋಡಿಗೆ, ತನ್ನೆದುರೇ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ, ಲೈಂಗಿಕ ಕ್ರಿಯಲ್ಲಿರುವಾಗಲೇ ಅವರ ಮೇಲೆ ಫಾಸ್ಟ್ ಗಂ ಸುರಿದು ಕೊಂದಿರುವ ವಿಲಕ್ಷಣ ಹಾಗೂ ವಿಚಿತ್ರ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಜೋಡಿ ಹತ್ಯೆಯಾದ ಮೂರು ದಿನಗಳ ಬಳಿಕ ಅವರಿಬ್ಬರ ನಗ್ನ ಸ್ಥಿತಿಯಲ್ಲಿ ಅವರ ಶವಗಳು ಅರಣ್ಯದಲ್ಲಿ ಪತ್ತೆಯಾಗಿದೆ.
ನ. 18ರಂದು ಉದಯಪುರದ ಕೆಲಬಾವಾಡಿಯ ಅರಣ್ಯ ಪ್ರದೇಶದಲ್ಲಿ ಜೋಡಿಯ ಶವ ಪತ್ತೆಯಾಗಿದೆ. ಆರಂಭದಲ್ಲಿ ಮರ್ಯಾದಾಗೇಡು ಹತ್ಯೆಯೆಂದು ಪೊಲೀಸರು ಶಂಕಿಸಿದ್ದರಲ್ಲದೇ, ಪ್ರಕರಣ ಭೇದಿಸಲು 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಅನುಮಾನಗೊಂಡು ಪೂಜಾರಿಯೊಬ್ಬನನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದ್ದು, ಬಂಧನದ ನಂತರ ಕೊಲೆ ಪ್ರಕರಣದ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.
ಜೋಡಿಯನ್ನು ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿರುವ ಪೂಜಾರಿ ಭಲೇಶ್ ಕುಮಾರ್ (55)ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದವರನ್ನು ವಿವಾಹೇತರ ಸಂಬಂಧ ಹೊಂದಿದ್ದ ಶಿಕ್ಷಕ ರಾಹುಲ್ ಮೀನಾ (30) ಮತ್ತು ಸೋನು ಕುನ್ವರ್ (28) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ
ರಾಜಸ್ಥಾನ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕೊಲೆಯಾದ ರಾಹುಲ್ ಮತ್ತು ಸೋನು ಇಬ್ಬರೂ ಬೇರೆ-ಬೇರೆ ವ್ಯಕ್ತಿಗಳನ್ನು ಮದುವೆಯಾಗಿದ್ದರು. ಆದರೂ ಇವರು ವಿವಾಹೇತರ ಸಂಬಂಧ ಹೊಂದಿದ್ದು, ನಗರದ ಇಚ್ಚಪೂರ್ಣ ಶೇಷನಾಗ್ ಭಾವಜಿ ಮಂದಿರದಲ್ಲಿ ಆಗಾಗ ಭೇಟಿಯಾಗುತ್ತಿದ್ದರು.
ರಾಹುಲ್ ಸೋನು ಜೊತೆ ಸಂಬಂಧ ಹೊಂದುತ್ತಲೇ ತನ್ನ ಪತ್ನಿಯೊಂದಿಗೆ ಆಗಾಗ ಜಗಳವಾಡಲು ಪ್ರಾರಂಭಿಸಿದ್ದನು. ಈ ವೇಳೆ ಆಕೆ ಅರ್ಚಕನಾದ ಭಲೇಶ್ ಕುಮಾರ್ ಸಹಾಯವನ್ನು ಕೋರಿದ್ದಾಳೆ. ಭಲೇಶ್ ನಗರದಲ್ಲಿ 7-8 ವರ್ಷಗಳಿಂದ ವಾಸವಿದ್ದು, ಜನರಿಗೆ ತಾಯತ ಕೂಡ ತಯಾರಿಸುತ್ತಿದ್ದ ಎಂದಿರುವ ಪೊಲೀಸರು, ಆತನಿಗೆ ಸೋನುವಿನ ಪರಿಚಯವೂ ಇದ್ದು, ಆಕೆಗೆ ರಾಹುಲ್ನೊಂದಿಗೆ ಸಂಬಂಧವಿದ್ದ ವಿಚಾರವನ್ನು ತಿಳಿದುಕೊಂಡಿದ್ದ.
ಪೂಜಾರಿ ತನ್ನ ಹಾಗೂ ಸೋನು ಜೊತೆಗಿನ ಸಂಬಂಧವನ್ನು ತನ್ನ ಪತ್ನಿಗೆ ಹೇಳಿದ್ದಾನೆ ಎಂದು ತಿಳಿದ ಶಿಕ್ಷಕ ರಾಹುಲ್, ಸುಳ್ಳು ಕಿರುಕುಳ ಪ್ರಕರಣ ದಾಖಲಿಸಿ, ಮಾನಹಾನಿ ಮಾಡುವುದಾಗಿ ಪೂಜಾರಿ ಭಲೇಶ್ಗೆ ಬೆದರಿಕೆ ಹಾಕಿದ್ದಾನೆ. ಇಲ್ಲಿಯವರೆಗೆ ತಾನು ಗಳಿಸಿದ್ದ ಕೀರ್ತಿ ಈ ಸುಳ್ಳು ಆರೋಪದಿಂದ ಹಾಳಾಗಬಾರದೆಂಬ ಕಾರಣಕ್ಕೆ ಭಲೇಶ್ ರಾಹುಲ್ ಹಾಗೂ ಸೋನು ಅಕ್ರಮ ಸಂಬಂಧವನ್ನು ‘ರೆಡ್ ಹ್ಯಾಂಡ್’ ಆಗಿ ಎಲ್ಲರ ಮುಂದೆ ತೋರಿಸಲು ಹಾಗೂ ತನ್ನ ಸೇಡನ್ನು ತೀರಿಸಲು ಕ್ರಿಮಿನಲ್ ಪ್ಲಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಲೇಶ್ ಸುಮಾರು 50 ಫಾಸ್ಟ್ ಗಂ ಟ್ಯೂಬನ್ನು ಖರೀದಿಸಿ, ಅದನ್ನು ಬಾಟಲಿಗೆ ಸುರಿದು ಇಟ್ಟುಕೊಂಡಿದ್ದ. ನವೆಂಬರ್ 15ರಂದು ಸಂಜೆ ರಾಹುಲ್ ಹಾಗೂ ಸೋನು ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ, ಏಕಾಂತದಲ್ಲಿರುವಾಗ ತನ್ನೆದುರೇ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಎಲ್ಲರೆದುರು ಕಂಡುಬಂದರೆ ತಾನು ತಪ್ಪಿಸಿಕೊಳ್ಳಬಹುದು ಎಂಬುದು ಭಲೇಶ್ನ ಉದ್ದೇಶವಾಗಿತ್ತು ಎಂದಿರುವ ಪೊಲೀಸರು, ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿದ್ದಾಗಲೇ ಅವರ ಮೇಲೆ ಫಾಸ್ಟ್ ಗಂ ಅನ್ನು ಸುರಿದಿದ್ದಾನೆ ಎಂದು ತಿಳಿಸಿದ್ದಾರೆ.
ಪೂಜಾರಿ ರಾಹುಲ್ ಹಾಗೂ ಸೋನು ಮೇಲೆ ಫಾಸ್ಟ್ ಗಂ ಸುರಿದಾಗ ಇಬ್ಬರೂ ಸ್ವಲ್ಪ ಸಮಯ ಅಂಟಿಕೊಂಡಿದ್ದರು. ಬಳಿಕ ಇಬ್ಬರೂ ತಮ್ಮನ್ನು ತಾವು ಬೇರ್ಪಡಿಸಲು ಪ್ರಯತ್ನಿಸಿದ್ದು, ಅವರಿಬ್ಬರ ಚರ್ಮಗಳು ಕಿತ್ತು ಬರಲು ಪ್ರಾರಂಭಿಸಿವೆ. ಇಬ್ಬರೂ ಬೇರ್ಪಡುವುದನ್ನು ಕಂಡು ಪೂಜಾರಿ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ರಾಹುಲ್ನ ಕತ್ತು ಸೀಳಿ, ಸೋನುಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೃತ್ಯ ಎಸಗಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು 3 ದಿನಗಳ ಬಳಿಕ ಇಬ್ಬರ ಶವಗಳನ್ನು ಪತ್ತೆಹಚ್ಚಿದ್ದಾರೆ. ಸುತ್ತ ಮುತ್ತಲಿನ ಪ್ರದೇಶದ ಸುಮಾರು 50 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, 200 ಜನರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ದೊರೆತ ಸಾಕ್ಷಿಗಳ ಆಧಾರದ ಮೇಲೆ ಜೋಡಿಯ ಸಾವಿನ ಹಿಂದೆ ಭಲೇಶ್ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಭಲೇಶ್ ಪಾತ್ರವನ್ನು ಪತ್ತೆ ಹಚ್ಚಲು ಕಾರಣವಾದದ್ದು ಅವರ ಕೈಯಲ್ಲಿ ಫಾಸ್ಟ್ ಗಂನ ಅವಶೇಷಗಳು ಕಂಡ ಬಳಿಕ ಎಂದಿರುವ ಪೊಲೀಸರು, “ಆತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಎಲ್ಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾನೆ. ಘಟನೆಯ ವಿವರಗಳನ್ನು ಆತನಿಂದಲೇ ತಿಳಿದುಕೊಂಡಾಗ ನಾವೇ ದಿಗ್ಭ್ರಾಂತಗೊಂಡಿದ್ದೆವು” ಎಂದು ಪೊಲೀಸರು ತಿಳಿಸಿದ್ದಾರೆ.
ಕಾಡಿನ ರಸ್ತೆಯಿಂದ 300 ಮೀಟರ್ ದೂರದಲ್ಲಿರುವ ಶವಗಳನ್ನು ಕಂಡಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿತ್ತು. ವ್ಯಕ್ತಿಯ ಗುಪ್ತಾಂಗ ಕೂಡ ಕತ್ತರಿಸಲ್ಪಟ್ಟಿದ್ದ ಸ್ಥಿತಿಯಲ್ಲಿ ಹಾಗೂ ದೇಹಗಳನ್ನು ಸುಡುವ ಪ್ರಯತ್ನಗಳು ಕೂಡ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.