ಜೈಂಟ್ ವೀಲ್ ಗೆ ಸಿಲುಕಿದ ಯುವತಿಯ ತಲೆಕೂದಲು ಚರ್ಮದ ಸಮೇತ ಸಂಪೂರ್ಣವಾಗಿ ಕಿತ್ತುಬಂದು ತೀವ್ರ ರಕ್ತಸ್ರಾವವಾದ ದಾರುಣ ಘಟನೆ ಶನಿವಾರ ರಾತ್ರಿ ನಡೆದಿದೆ.
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ರಥಸಪ್ತಮಿಯ ಜಾತ್ರೆಯ ಅಂಗವಾಗಿ ದೇವಸ್ಥಾನದ ಮೈದಾನದಲ್ಲಿ ಮಕ್ಕಳ ಮನರಂಜನೆಗಾಗಿ ಹಾಕಲಾಗಿದ್ದ ‘ಜೈಂಟ್ ವೀಲ್’ ನಲ್ಲಿ ಕುಳಿತಿದ್ದ 14 ವರ್ಷದ ಯುವತಿಯ ತಲೆಕೂದಲು ಜೈಂಟ್ ವೀಲ್ ನಲ್ಲಿ ಸಿಕ್ಕಿಕೊಂಡು ಚರ್ಮದ ಸಮೇತ ಕಿತ್ತು ಬಂದಿದೆ.
ಬೆಂಗಳೂರಿನ 14 ವರ್ಷದ ಶ್ರೀವಿದ್ಯಾ ಎಂಬಾಕೆಯೇ ಅವಘಡದಲ್ಲಿ ಸಿಲುಕಿ ಕೂದಲು ಕಳೆದು ಕೊಂಡ ಯುವತಿ. ಈಕೆ ಬೆಂಗಳೂರಿನ ಮಂಜುಳಾ ಮತ್ತು ಕೃಷ್ಣ ಅವರ ಮಗಳಾಗಿದ್ದು, ಶ್ರೀರಂಗಪಟ್ಟಣದಲ್ಲಿರುವ ಅವರ ದೊಡ್ಡಮ್ಮನ ಮನೆಗೆ ಬಂದಿದ್ದಳು ಎನ್ನಲಾಗಿದೆ.
ಶನಿವಾರ ರಾತ್ರಿ ರಂಗನಾಥ ಸ್ವಾಮಿ ದರ್ಶನ ಪಡೆದು ಬರುವ ವೇಳೆ ಜೈಂಟ್ ವೀಲ್ ಆಟದಲ್ಲಿ ಭಾಗಿಯಾಗಿದ್ದಾಗ ಈ ದುರಂತ ನಡೆದಿದೆ. ಶ್ರೀವಿದ್ಯಾ ಗಂಭೀರವಾಗಿ ಗಾಯಗೊಂಡಿದ್ದು,ಆಕೆಯನ್ನು ಮೈಸೂರಿನ ಮಣಿಪಾಲ್ (ಕೊಲಂಬಿಯಾ) ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಗುತ್ತಿಗೆದಾರರು ಜೈಂಟ್ ವೀಲ್ ರೈಡ್ ಸ್ಥಳದಲ್ಲಿ ಯಾವುದೇ ಸುರಕ್ಷಿತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ ಇರುವುದು ಮತ್ತು ನಿರ್ಲಕ್ಷ್ಯ ತೋರಿರುವುದೇ ಅವಘಡಕ್ಕೆ ಕಾರಣ. ಈ ಸಂಬಂಧ ಶ್ರೀರಂಗಪಟ್ಟಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.