ಹೇಮಾವತಿ ನದಿಯಿಂದ ನೀರೆತ್ತುವ 265 ಕೋಟಿ ರೂಪಾಯಿ ವೆಚ್ಚದ ಕಟ್ಟಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ದೊರೆತಿದ್ದು,ಸಚಿವ ನಾರಾಯಣಗೌಡರ ಪ್ರಯತ್ನಕ್ಕೆ ಸರ್ಕಾರ ಮನ್ನಣೆ ನೀಡುವ ಮೂಲಕ ರೈತರ ನಾಲ್ಕು ದಶಕಗಳ ಕನಸು ನನಸಾಗುತ್ತಿದೆ.
ಏತ ನೀರಾವರಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಜಾಕ್ ವೆಲ್ ಹಾಗೂ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ.
ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸಲಿದೆ. ಕಟ್ಟೆಕ್ಯಾತನಹಳ್ಳಿ ಅಣೆಕಟ್ಟಿಗೆ ಹೊಂದಿಕೊಂಡಂತೆ ಹೇಮಾವತಿ ನದಿಯ ನೀರನ್ನು ಬಳಸಿಕೊಂಡು ನಿರ್ಮಿಸುತ್ತಿರುವ ತಾಲ್ಲೂಕಿನ ರೈತರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ಕಟ್ಟಹಳ್ಳಿ ಬಳಿ ಆರಂಭವಾಗಿರುವ ಹೇಮಾವತಿ ನದಿ ನೀರಿನ ಏತನೀರಾವರಿ ಯೋಜನೆಯ ಆರಂಭಕ್ಕೆ ರೈತರು ಹರ್ಷ ವ್ಯಕ್ತಪಡಿಸಿದರು.ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಡಾ.ನಾರಾಯಣಗೌಡ ಅವರ ರೈತಪರ ಕಾಳಜಿಯನ್ನು ಶ್ಲಾಘಿಸಿದರು.
ಐದು ಅಡಿ ವ್ಯಾಸದ ಬೃಹತ್ ಜಾಕ್ ವೆಲ್
ಕಟ್ಟಹಳ್ಳಿ ಬಳಿ ಹೇಮಾವತಿ ನದಿಯ ನೀರನ್ನು ಬೃಹತ್ ಜಾಕ್ ವೆಲ್ ಮೂಲಕ ಲಿಫ್ಟ್ ಮಾಡಿ ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ ವ್ಯಾಪ್ತಿಯ ಕೆರೆ ಕಟ್ಟೆಗಳನ್ನು ತುಂಬಿಸಿ ಜನ ಜಾನುವಾರುಗಳಿಗೆ ಹಾಗೂ ಬೇಸಾಯಕ್ಕೆ ಅನುಕೂಲ ಮಾಡಿಕೊಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ರೈತಮುಖಂಡರು ಹಾಗೂ ಸಾರ್ವಜನಿಕರು ಸ್ವಾಗತಿಸಿದ್ದಾರೆ.
ಕೃಷ್ಣರಾಜಸಾಗರದ ಹಿನ್ನೀರಿಗೆ ಹೊಂದಿಕೊಂಡಂತೆ ಕಟ್ಟಹಳ್ಳಿ ಬಳಿ ಹೇಮಾವತಿ ನದಿಯ ನೀರನ್ನು ಭಾರೀ ಪಂಪುಗಳ ಮೂಲಕ ಲಿಫ್ಟ್ ಮಾಡಿ ಕೆರೆಕಟ್ಟೆಗಳನ್ನು ತುಂಬಿಸುವ ಜಾಕ್ವೆಲ್ ಕಾಮಗಾರಿಯು ಭರದಿಂದ ಸಾಗಿದೆ.
ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ ಮಳೆಯಾಶ್ರಿತ ಪ್ರದೇಶಗಳ ರೈತ ಬಾಂಧವರು ಕಟ್ಟಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿಯನ್ನು ಸ್ವಾಗತಿಸಿದ್ದು, ಆದಷ್ಟು ಜಾಗ್ರತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಕೆರೆ ಕಟ್ಟೆಗಳನ್ನು ತುಂಬಿಸುವ ಮೂಲಕ ರೈತಬಾಂಧವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.