ವರ್ಗಾವಣೆ ಆದೇಶದಿಂದ ಮನನೊಂದು ಕೆಎಸ್ಆರ್’ಟಿಸಿ ಚಾಲಕ ಹಾಗೂ ನಿರ್ವಾಹಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಬುಧವಾರ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
ನಾಗಮಂಗಲ ಪಟ್ಟಣದ ಕೆಎಸ್ಆರ್’ಟಿಸಿ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊಣಕೆರೆ ಹೋಬಳಿ ಕಾಂತಪುರ ಗ್ರಾ.ಪಂ. ವ್ಯಾಪ್ತಿಯ ಹಂದೆನಹಳ್ಳಿ ಗ್ರಾಮದ ಹೆಚ್.ಆರ್. ಜಗದೀಶ್ (40) ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ದಾಖಲಾಗಿರುವ ನೌಕರ.
ಈ ಸಂಬಂಧ ಕೆಎಸ್ಆರ್’ಟಿಸಿ ಸಹಾಯಕ ಕಾರ್ಯ ಅಧೀಕ್ಷಕ ಮಂಜುನಾಥ್ ಪ್ರತಿಕ್ರಿಯಿಸಿ, ವಾರದ ಹಿಂದೆ ಕೆಎಸ್ಆರ್’ಟಿಸಿ ನೌಕರ ಜಗದೀಶ್, ಮಹಿಳೆ ಸಿಬ್ಬಂದಿಯೊಂದಿಗೆ ಜಗಳವಾಡಿದ್ದ ಘಟನೆ ನಡೆದಿತ್ತು. ಈ ವಿಚಾರ ಕ್ಷೇತ್ರದ ಶಾಸಕರೂ ಆದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಗಮನಕ್ಕೆ ಬಂದು, ನೌಕರ ಜಗದೀಶ್ ವರ್ಗಾವಣೆಗೆ ಸೂಚಿಸಿದ್ದರು. ಅದರಂತೆ ಇಂದು ಕೆಎಸ್ಆರ್’ಟಿಸಿ ಅಧಿಕಾರಿಗಳು, ವರ್ಗಾವಣೆ ಪತ್ರ ನೀಡಿದಾಗ ಮನನೊಂದು ವಿಷ ಸೇವಿಸಿದ್ದಾರೆಂದು ತಿಳಿಸಿದರು.
ಬಸ್ ಡಿಪೋ ಅವರಣದಲ್ಲೇ ವಿಷ ಸೇವಿಸಿದ್ದ ಜಗದೀಶ್ ಗೆ ನಾಗಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.