ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ನೆರೆಯ ತುಮಕೂರು, ಹಾಸನ, ಶಿವಮೊಗ್ಗಕ್ಕಿಂತ ಹಿಂದುಳಿದ್ದು, ಈ ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಶಾಸಕ ಎಂ.ಶ್ರೀನಿವಾಸ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಅನೇಕ ಅಭ್ಯರ್ಥಿಗಳು ಉದ್ಭವಗೊಂಡಿದ್ದಾರೆ. ಕುಮಾರಸ್ವಾಮಿ ಇಲ್ಲಿ ಸ್ಪರ್ಧಿಸಿದರೆ ಮಂಡ್ಯ ಉದ್ದಾರವಾಗುತ್ತದೆ ಎಂಬ ಭಾವನೆ ನನ್ನದಾಗಿದ್ದು. ಕ್ಷೇತ್ರ ತ್ಯಾಗಕ್ಕೆ ಮುಂದಾಗುತ್ತೇನೆಂದರು.
ಈಗಾಗಲೇ ಮೂರು ಬಾರಿ ಕುಮಾರಸ್ವಾಮಿ ಸ್ಪರ್ಧೆಯನ್ನು ಆಹ್ವಾನಿಸಿದ್ದೇನೆ. ಅವರನ್ನು ಹೊರತುಪಡಿಸಿದರೆ ನಾನು ಸ್ಪರ್ಧಿಸಲು ಬದ್ಧನಾಗಿದ್ದೇನೆ. ನನ್ನೊಟ್ಟಿಗೆ ಹೆಚ್.ಎನ್.ಯೋಗೇಶ್, ಹೆಚ್.ಎಸ್.ಮಂಜು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ ಎಂದರು.
ಅನ್ಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾದು ನೋಡುತ್ತೇನೆ, ಪಕ್ಷದ ತೀರ್ಮಾನಕ್ಕೆ ಬದ್ಧನಾಗುತ್ತೇನೆ ಎಂಬ ಗೊಂದಲದ ಉತ್ತರ ನೀಡಿದರು.
ಅಭ್ಯರ್ಥಿ ವಿಚಾರದಲ್ಲಿ ಆಗಿರುವ ಗೊಂದಲ ನಿವಾರಣೆಗೆ ಕುಮಾರಸ್ವಾಮಿಯೇ ಸ್ಪರ್ಧಿಸಬೇಕು. ಅನುದಾನ ತಾರತಮ್ಯದಲ್ಲಿ ಕ್ಷೇತ್ರಕ್ಕೆ ಆಗಿರುವ ವಂಚನೆಯನ್ನು ಸರಿದೂಗಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಬಿ.ಲೋಕೇಶ್, ಮೋಹನ್, ಭೈರವ ಹಾಗೂ ಮಂಜು ಉಪಸ್ಥಿತರಿದ್ದರು.