ಜಾನುವಾರುಗಳಿಗೆ ಅಗತ್ಯವಾದ ಮೇವು ಒದಗಿಸಿ ಸಂರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಅಶೋಕ್ ಜಯರಾಂ ದೂರಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 1.15 ಕೋಟಿ ಪ್ರಮುಖ ಜಾನುವಾರುಗಳಿದ್ದು, ಇವುಗಳ ಸಂರಕ್ಷಣೆಯನ್ನು ಮಾಡುವಲ್ಲಿ ಸರ್ಕಾರ ಎಡವಿದೆ, 2023-24ರಲ್ಲಿ ಕರ್ನಾಟಕ ರಾಜ್ಯದ 196 ತಾಲೂಕುಗಳಲ್ಲಿ ತೀವ್ರ ಬರಕ್ಕೆ ಒಳಗಾಗಿದ್ದು, 27 ತಾಲ್ಲೂಕುಗಳು ಸಾಧಾರಣ ಬರಕ್ಕೆ ಒಳಗಾಗಿದೆ ಎಂದು ಘೋಷಿಸಿದೆ, ಆದರೆ ಇಂತಹ ಸಂದರ್ಭದಲ್ಲಿ ಮೇವಿನ ವ್ಯವಸ್ಥೆಯನ್ನು ಕೈಗೊಂಡಿಲ್ಲ ಎಂದರು.
ಹಸಿರು ಮೇವನ್ನು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ, ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಹಸಿರು ಮೇವನ್ನು ಬೆಳೆಯಲು ಗ್ರಾಮಗಳಲ್ಲಿರುವ ಗೋಮಾಳಗಳನ್ನು ಮತ್ತು ಖಾಲಿ ಜಾಗಗಳನ್ನು ಗುರುತಿಸಬೇಕಿತ್ತು, ಕೆರೆ ಮತ್ತು ನದಿ ಪಾತ್ರಗಳಲ್ಲಿ ಜಾಗವನ್ನು ಗುರುತಿಸಿ ಹಸಿರು ಮೇವನ್ನು ಬೆಳೆಯಬೇಕಿತ್ತು. ಅಂತಹ ಕಾರ್ಯವಾಗಿಲ್ಲ ಎಂದು ಎಂದು ಕಿಡಿಕಾರಿದರು.
ಮಿನಿ ಕಿಟ್ ನಲ್ಲಿ ಮೇವಿನ ಬೀಜಗಳನ್ನು ವಿತರಿಸಬೇಕು ಎಂಬ ಮಾರ್ಗಸೂಚಿಯನ್ನು ಪಾಲಿಸಲು ಸರ್ಕಾರ ವಿಫಲವಾಗಿದೆ. ರೈತರು ಮೇವಿಲ್ಲದೇ ತಮ್ಮ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರುವುವಂತಾಗಿದೆ, ಇದನ್ನು ತಪ್ಪಿಸಬೇಕೆಂದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರಾದ ಅಶೋಕ್ ಕುಮಾರ್, ಸಿ.ಟಿ.ಮಂಜುನಾಥ್, ಬಸವರಾಜು, ಜವರೆಗೌಡ ಹಾಗೂ ವಿವೇಕ್ ಉಪಸ್ಥಿತರಿದ್ದರು.