ವರದಿ : ಪ್ರಭು ವಿ ಎಸ್
ಕೌಟುಂಬಿಕ ಕಲಹದ ಹಿನ್ನೆಲೆ ಮೂರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ತಾಯಿಯೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿ ಗುರುವಾರ ಸಂಜೆ ಜರುಗಿದೆ.
ಹೊಳೆ ಬೀದಿ ನಿವಾಸಿ, ಕಾರ್ ಮ್ಯೆಕಾನಿಕ್ ಆಖಿಲ್ ಅಹಮದ್ ಅವರ ಪತ್ನಿ ಉಸ್ಮಾ ಕೌಸರ್ (32)ಎಂಬಾಕೆಯೇ ತನ್ನ ಮೂವರು ಮಕ್ಕಳಾದ ಪುತ್ರ ಹಾರಿಜ್ (8) ಪುತ್ರಿಯರಾದ ಅಲಿಜಾ (4) ಅನಮ್ ಫಾತಿಮಾ (2) ಅವರಿಗೆ ವಿಷ ಹಾಕಿ ಕೊಂದು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.
ಪಟ್ಟಣದ ಹೊಳೆಬೀದಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕುಟುಂಬದಲ್ಲಿ ಇತ್ತೀಚೆಗೆ ವಿರಸ ಏರ್ಪಟ್ಟಿತ್ತು. ದಂಪತಿಗಳಿಗೆ ಹಿರಿಯರು ಬುದ್ದಿಮಾತು ಹೇಳಿದ್ದರು. ಇಂದು ಪತಿ ಮನೆಯಲ್ಲಿ ಇರದ ವೇಳೆ ಮಕ್ಕಳಿಗೆ ವಿಷವುಣಿಸಿ ಬಳಿಕ ಆಕೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತಳ ತಾಯಿ ರಾತ್ರಿ ಮಗಳ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸಮೀಪದಲ್ಲೇ ವಾಸವಿದ್ದ ಮೃತರ ಸಂಬಂದಿಕರು ವಿಷಯ ತಿಳಿದು ಸ್ಥಳಕ್ಕಾಗಮಿಸಿ ಇತರರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕುಟುಂಬ ಸದಸ್ಯರ ರೋದನ ಮನಕಲಕುವಂತಿತ್ತು.
ಮದ್ದೂರು ವೃತ್ತ ನಿರೀಕ್ಷಕ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.