“ಆರ್ಎಸ್ಎಸ್-ಬಿಜೆಪಿ ದೇಶವನ್ನು ನಾಶ ಮಾಡಿರುವ ‘ವಿಷ’. ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ದೆಹಲಿಯಲ್ಲಿ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದ ‘ಪ್ರಜಾಪ್ರಭುತ್ವ ಉಳಿಸಿ’ ರ್ಯಾಲಿಯಲ್ಲಿ ಮಾತನಾಡಿದ ಅವರು, “ಈ ಚುನಾವಣೆ ಪ್ರಜಾಪ್ರಭುತ್ವ, ದೇಶ ಮತ್ತು ಸಂವಿಧಾನವನ್ನು ಉಳಿಸುವುಕ್ಕಾಗಿ” ಎಂದು ಹೇಳಿದರು.
“ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಬಂಧನದ ನಂತರ ‘ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಇರುವುದನ್ನು ಎತ್ತಿ ತೋರಿಸಲು ಈ ರ್ಯಾಲಿ ಪ್ರಯತ್ನಿಸುತ್ತದೆ. ಕೇಜ್ರಿವಾಲ್ ಮತ್ತು ಸೋರೆನ್ ಅವರ ಪತ್ನಿಯರು ಕೂಡ ರ್ಯಾಲಿಯಲ್ಲಿ ಉಪಸ್ಥಿತರಿದ್ದರು.
“ನಾವು ಒಂದಾಗಬೇಕು, ನಾವು ಒಂದಾದರೆ ಮಾತ್ರ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ನಾವು ಪರಸ್ಪರ ದಾಳಿ ಮತ್ತು ಹೋರಾಟವನ್ನು ಮುಂದುವರೆಸಿದರೆ ನಾವು ಯಶಸ್ವಿಯಾಗಲು ಸಾಧ್ಯವಾಗದು. ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಮತ್ತು ನಾವು ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ಹೇಳಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು, “ಈ ಚುನಾವಣೆಯಲ್ಲಿ ಯಾವುದೇ ಲೆವೆಲ್-ಪ್ಲೇಯಿಂಗ್ ಫೀಲ್ಡ್ (ಎಲ್ಲ ಸ್ಪರ್ಧಿಗಳು ಒಂದೇ ನಿಯಮ, ಅವಕಾಶ) ಇಲ್ಲ. ಪ್ರಧಾನಿ ಮೋದಿ ನೆಲವನ್ನು ಅಗೆದು ಬಳಿಕ ಪ್ರತಿಪಕ್ಷಗಳನ್ನು ಅಗೆದ ನೆಲದಲ್ಲಿ ಕ್ರಿಕೆಟ್ ಆಡಲು ಹೇಳುತ್ತಿದ್ದಾರೆ. ಕಾಂಗ್ರೆಸ್ನ ಹಣವನ್ನು ಈಗಾಗಲೇ ಕದಿಯಲಾಗಿದ್ದು, ಈ ಚುನಾವಣೆಯು ನ್ಯಾಯಯುತವಾಗಿಲ್ಲ ಎಂದು ನಾನು ಈಗಾಗಲೇ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ಹೇಳಿದ್ದೇನೆ” ಎಂದರು.
“ಬಿಜೆಪಿ ಮತ್ತು ಆರೆಸ್ಸೆಸ್ ವಿಷದಂತಿವೆ, ಅದರ ರುಚಿ ನೋಡಬೇಡಿ. ಅವರು ದೇಶವನ್ನು ನಾಶಪಡಿಸಿದ್ದಾರೆ ಮತ್ತು ಅದನ್ನು ಇನ್ನಷ್ಟು ನಾಶ ಮಾಡಲು ಬಿಡಬಾರದು. ಮೋದಿ ಮತ್ತು ಅವರ ಸಿದ್ಧಾಂತವನ್ನು ತೊಲಗಿಸುವವರೆಗೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಿಸಿದರು.