ರಾಜ್ಯ ಭೀಕರ ಬರವನ್ನು ಎದುರಿಸುತ್ತಿದೆ. ದೇವರಾಜೇಗೌಡ ಉಲ್ಲೇಖಿಸಿದ ನಾಲ್ವರು ಸಚಿವರಿಗೆ ಬೇರೆ ಕೆಲಸ ಇಲ್ವಾ? ಇದನ್ನೆಲ್ಲಾ ನಿರ್ದೇಶನ ಮಾಡುತ್ತಿರುವುದು ಅಮಿತ್ ಶಾ ಎಂದು ದೇವರಾಜೇಗೌಡ ಈ ಹಿಂದೆ ಹೇಳಿದ್ದರು. ಹೀಗಿರುವಾಗ, ಅಮಿತ್ ಶಾ ಅವರೇ ದೇವರಾಜೇಗೌಡರ ಬಾಯಿಯಿಂದ ಈ ಎಲ್ಲ ಮಾತನ್ನು ಹೇಳಿಸಿರುವ ಸಾಧ್ಯತೆ ಇಲ್ಲ ಎಂದು ಹೇಗೆ ಹೇಳಲು ಸಾಧ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
“ಎಸ್ಐಟಿ ಒಂದು ಸರ್ಕಾರಿ ಸಂಸ್ಥೆ, ಸಿಬಿಐನಿಂದ ಮಾತ್ರ ನ್ಯಾಯ ಸಿಗುತ್ತದೆ ಎನ್ನುವುದು ತಪ್ಪಲ್ಲವೇ, ಅಮಿತ್ ಶಾ ಜೊತೆ ನೇರ ಸಂಪರ್ಕದಲ್ಲಿ ಅವರಿದ್ದಾರಲ್ಲವೇ, ನೂರು ಕೋಟಿ ಆಫರ್ ಬಗ್ಗೆ ಅವರಿಗೆ ತಿಳಿಸಬೇಕಾಗಿತ್ತು” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದೇವರಾಜೇಗೌಡ ಆರೋಪವೇನು?
ಹಾಸನ ಜೆಎಂಎಫ್ಸಿ ಕೋರ್ಟ್ ಹೊರಗೆ ಪೊಲೀಸ್ ವ್ಯಾನ್ನೊಳಗಿದ್ದ ವೇಳೆಯಲ್ಲಿಯೇ ವಕೀಲ ದೇವರಾಜೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, “ಎಲ್.ಆರ್. ಶಿವರಾಮೇಗೌಡ ಮೂಲಕ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜೊತೆಗೆ ಮಾತನಾಡಿಲ್ಲ” ಎಂದು ಹೇಳಿದರು.
“ಡಿ ಕೆಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ನೀನು ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಹೇಳು. ಪೆನ್ಡ್ರೈವ್ನ ಕುಮಾರಸ್ವಾಮಿ ಹಂಚಿದ್ದರು ಅಂತ ಹೇಳು. ನಿನಗೆ ಸಮಸ್ಯೆ ಆಗಲ್ಲ. ಸೆಕ್ಯೂರ್ ಮಾಡ್ತೀನಿ ಅಂತ ಭರವಸೆ ನೀಡಿದ್ದರು” ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.