ಹಣ ಪಡೆದು ಮುಖ್ಯಮಂತ್ರಿ ಮಾಡುವ ಅನಿವಾರ್ಯತೆ ಬಿಜೆಪಿ ಪಕ್ಷಕ್ಕಿಲ್ಲ ಎಂದು ಇಂಧನ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಶ್ರೀರಂಗಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಖ್ಯಮಂತ್ರಿ ಆಗಲು ಕೇಂದ್ರದವರು 2500 ಕೋಟಿ ಹಣ ಕೇಳಿದ್ದರು ಎಂದು ಬಿಜೆಪಿ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಯಾವ ಹಿನ್ನಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ.
ಕೇಂದ್ರದವರು ಹಣ ಪಡೆದು ಮುಖ್ಯಮಂತ್ರಿ ಮಾಡುವ ಅನಿವಾರ್ಯತೆ ಬಿಜೆಪಿ ಪಕ್ಷಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ರಾಜ್ಯಾಧ್ಯಕ್ಷರು ಯತ್ನಾಳ್ರೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಪಕ್ಷವು ಇದುವರೆಗೂ ತನ್ನ ತತ್ವ, ಸಿದ್ಧಾಂತಗಳಿಗೆ ಬದ್ಧ ವಾಗಿದ್ದು, 35 ವರ್ಷಗಳಿಂದ ನಾನು ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಇವತ್ತು ಇಷ್ಟು ದೊಡ್ಡ ಹುದ್ದೆಗೆ ಬಂದಿದ್ದೀನಿ. ಅದಕ್ಕೆ ಪಕ್ಷವೇ ಕಾರಣ. ಜೊತೆಗೆ ಇಷ್ಟು ವರ್ಷದ ನನ್ನ ಅನುಭವದಲ್ಲಿ ಈ ರೀತಿ ಹಣ ಪಡೆದು ಮುಖ್ಯಮಂತ್ರಿಗಳಾಗಿರುವ ಉದಾಹರಣೆಗಳೂ ನನ್ನ ಕಣ್ಣ ಮುಂದೆ ಇಲ್ಲ ಎಂದು ಶಾಸಕ ಯತ್ನಾಳ್ ಹೇಳಿಕೆಯನ್ನು ಖಂಡಿಸಿದರು.
ಪಿಎಸ್ಐ ಹಗರಣದಲ್ಲಿನ ಕಿಂಗ್ ಪಿನ್ ಹೆಸರು ಹೇಳಿದರೆ ಬಿಜೆಪಿ ಸರ್ಕಾರವೇ ಬಿದ್ದು ಹೋಗುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುನಿಲ್ ಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಯಾವ ವಿಚಾರವು ಇಲ್ಲಿಯವರೆವಿಗೂ ಅರ್ಥವಾಗಿಲ್ಲ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರು ಯಾವ ವಿಚಾರವನ್ನು ಇಲ್ಲಿಯವರೆಗೂ ಸ್ಪಷ್ಟವಾಗಿ ಜನರ ಮುಂದೆ ಇಟ್ಟಿಲ್ಲ. ಹಾಗೆಯೇ ಪಿಎಸ್ಐ ಹಗರಣದ ವಿಚಾರಗಳನ್ನು ಸಾಕ್ಷ್ಯಧಾರ ಸಹಿತ ಸ್ಪಷ್ಟ ಪಡಿಸಲಿ. ಹಾಗೊಂದು ವೇಳೆ ಸ್ಪಷ್ಟಪಡಿಸಿದರೆ ಪಕ್ಷದ ವರಿಷ್ಠರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.
ತಹಸೀಲ್ದಾರ್ ಶ್ವೇತ ಎನ್. ರವೀಂದ್ರ, ನಿಮಿಷಾಂಬ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೃಷ್ಣಪ್ಪ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಿ. ಹಳ್ಳಿ ರಮೇಶ್ ಸೇರಿದಂತೆ ಇತರರಿದ್ದರು.