ಪ್ರಸ್ತುತ ಒತ್ತಡದ ಜೀವನ ಶೈಲಿಯಿಂದ ಹೆಚ್ಚು ಕಾಯಿಲೆಗಳು ಬರುತ್ತಿದ್ದು, ಎಲ್ಲರೂ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನ ಹರಿಸಬೇಕೆಂದು ಪಿಇಟಿ ಅಧ್ಯಕ್ಷ ವಿಜಯಾನಂದ ಸಲಹೆ ನೀಡಿದರು.
ಮಂಡ್ಯ ನಗರದ ಕಲ್ಲುಕಟ್ಟಡ ಬಾಲಕಿಯರ ಪದವಿಪೂರ್ವ ಕಾಲೇಜು ಆರವಣದಲ್ಲಿ ಡಯಾಕೇರ್ ಡಯಾಬಿಟಿಕ್ ಹೆಲ್ ಕೇರ್ ಸೆಂಟರ್ ಮಧುಮೇಹ ದಿನದ ಅಂಗವಾಗಿ ಆಯೋಜಿಸಿದ್ದ ”ವಾಕಥಾನ್-ನಿಮ್ಮ ನಡಿಗೆ ಆರೋಗ್ಯದ ಕಡೆಗೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಸರಿಯಾಗಿದ್ದರೆ ಅನಾರೋಗ್ಯ ಬಂದರೂ ಎದರಿಸಬಹದು, ದೈಹಿಕ ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜಿಮ್,ವಾಕಿಂಗ್, ಜಾಗ್ ಮಾಡುವುದು ಉತ್ತಮ, ಅತಿಯಾಗಿ ಜಿಮ್ ಮಾಡುವುದರಲ್ಲಿಯೂ ಅಡ್ಡಪರಿಣಾಮವಿದೆ ಎಂದು ವೈದ್ಯರು ಹೇಳುತ್ತಾರೆ. ಡಯಾಬಿಟಿಕ್ ತಜ್ಞ ಡಾ.ಅರುಣಾನಂದ ಅವರು ಬೆಂಗಳೂರಿನಲ್ಲಿ ಪರಿಣಿತಿ, ಪಡೆದು ಮಂಡ್ಯಕ್ಕೆ ಬಂದಿದ್ಧಾರೆ, ಗ್ರಾಮೀಣ ಭಾಗದ ಪ್ರತಿಭಾವಂತರು, ಅವರ ಸೇವೆಯನ್ನು ಜನತೆ ಪಡೆದುಕೊಳ್ಳಬೇಕೆಂದರು.
ಚರ್ಮ ಮತ್ತು ನರ ಹಾಗೂ ಲೈಂಗಿಕ ರೋಗ ತಜ್ಞ ಡಾ.ಶಂಕರೇಗೌಡ, ನಮ್ಮ ಆರೋಗ್ಯದ ಬಗ್ಗೆ ಅರಿವು ಇರಬೇಕು, ಎಲ್ಲಿಯವರೆಗೆ ಆರೋಗ್ಯ ಕಾಳಜಿ ಇರುತ್ತದೋ, ಅಲ್ಲಿಯವರೆಗೂ ಅನಾರೋಗ್ಯ ಕಾಡದು. ದೇಹದ ತೂಕ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು. ದೈನಂದಿನ ಚಟುವಟಿಕೆಗಳು ಆರೋಗ್ಯಕ್ಕೆ ಪೂರಕವಾಗಿರುತ್ತವೆ ಎಂದರು.
ಓದುವ ಜೊತೆಗೆ ದೈಹಿಕ ಆರೋಗ್ಯವನ್ನು ನೋಡಿಕೊಳ್ಳಬೇಕು, ವ್ಯಾಯಾಮ, ದುಡಿಮೆ, ನಡಿಗೆ ತುಂಬ ಉಪಯುಕ್ತ. ದಿನಕ್ಕೆ ಒಂದು ಗಂಟೆ ಸಮಯ ನಡಿಗೆ, ಆರೋಗ್ಯದ ರಕ್ಷಣೆಗೆ ಉತ್ತಮ. ಇವತ್ತಿನ ದಿನಗಳಲ್ಲಿ ಅತಿಯಾಗಿ ದೇಹವನ್ನು ದಂಡಿಸುವುದು ಅಪಾಯಕಾರಿಯಾಗಿದೆ, 35 ವರ್ಷಗಳವರಗೆ ದೈಹಿಕ ಚಟುವಟಿಕೆ ಮಾಡಿದರೆ, ಯಾವುದೇ ತೊಂದರೆ ಯಾಗದು, 40 ವರ್ಷ ಮೇಲ್ಪಟ್ಟವರ ದೈಹಿಕ ಶ್ರಮ ಮಿತಿಯಲ್ಲಿರಬೇಕು, 60 ಮೇಲ್ಪಟ್ಟವರು ವಾಕ್ ಮಾಡುವುದು ಉತ್ತಮ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಉಚಿತವಾಗಿ ಸಕ್ಕರೆ ಕಾಯಿಲೆ ತಪಾಸಣೆ ನಡೆಯಿತು, ನಂತರ ಮೈಸೂರು ಬೆಂಗಳೂರು ಹೆದ್ದಾರಿ ಮೂಲಕ ವಾಕಥಾನ್ ಸಾಗಿ, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮುಕ್ತಾಯಗೊಂಡಿತು. ವಿದ್ಯಾರ್ಥಿಗಳು, ನಾಗರೀಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಡಯಾಕೇರ್ ಡಯಾಬಿಟಿಕ್ ಹೆಲ್ತ್ ಕೇರ್ ಸೆಂಟರ್ ನ ಮುಖ್ಯಸ್ಥ ಡಾ.ಅರುಣಾನಂದ, ಯೋಗ ಗುರು ಶಿವರುದ್ರಪ್ಪ, ಎಸ್ಬಿಐ ಬ್ಯಾಂಕ್ನ ಇಂದೇಶ್ ಉಪಸ್ಥಿತರಿದ್ದರು.