ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಭೂ ಸ್ವಾಧೀನದಲ್ಲಿ ಸಿಇಓ ಕಚೇರಿಯಲ್ಲಿ ಮೀಟಿಂಗ್ ಮಾಡುವ ರಾಜಕಾರಣಿಯ ಆಪ್ತರೇ ದಲ್ಲಾಳಿಗಳಾಗಿ ಅವ್ಯವಹಾರ ಮಾಡಿದ್ದಾರೆಂದು
ಸಂಸದೆ ಸುಮಲತಾ ಅಂಬರೀಶ್ ಹೆಸರೇಳದೆ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.
ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜನರ ಬಳಿ ಹೋಗದೆ ಕಚೇರಿಯಲ್ಲಿ ಕೂತು ಹೋಗುತ್ತಿರುವ ರಾಜಕಾರಣಿ ಹಾಗೂ ಕೇಂದ್ರ ಮಂತ್ರಿಗಳಿಗೆ ಅರ್ಜಿ ಕೊಟ್ಟು ಪೋಟೋ ತೆಗೆಸಿಕೊಂಡು ಜನರಿಗೆ ಮೋಸ ಮಾಡುತ್ತಿರುವ ರಾಜಕಾರಣಿಯ ಶಿಷ್ಯಂದಿರೇ ಹೆದ್ದಾರಿ ಭೂಸ್ವಾಧೀನದಲ್ಲಿ ದಲ್ಲಾಳಿಗಳಾಗಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ನಾನು ಹಳ್ಳಿಗಳ ಉದ್ಧಾರ ಮಾಡ್ತೀನಿ ಎಂದು ಹೇಳ್ತಾ ಸಿಇಓ ಕಚೇರಿಯಲ್ಲಿ ಮೀಟಿಂಗ್ ಮಾಡಿ ಹೋಗುವ ರಾಜಕಾರಣಿಯ ಆಪ್ತರಾದ 7 ಜನ ದಲ್ಲಾಳಿಗಳು ಹೆದ್ದಾರಿ ಅಕ್ರಮದಲ್ಲಿ ಭಾಗಿಯಾಗಿ ರೈತರಿಗೆ ನೀಡುವ ಪರಿಹಾರ ಹಣದಲ್ಲಿ ಮೋಸ ಮಾಡಿದ್ದಾರೆ. ಅವರು ರೈತರ ಜೊತೆ ಮಾತನಾಡಿರುವ ಆಡಿಯೋ ನಮ್ಮ ಬಳಿ ಇದೆ ಎಂದು ಕಿಡಿಕಾರಿದರು.
ಆ ರಾಜಕಾರಣಿ ಇಲ್ಲಿವರೆಗೂ ಜಿಲ್ಲೆಗೆ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಪ್ರವಾಸೋದ್ಯಮಕ್ಕೆ ವಿಶ್ವದಲ್ಲಿ ಹೆಸರುವಾಸಿಯಾದ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಎಕ್ಸ್ ಪ್ರೆಸ್ ರೈಲು ನಿಲ್ಲಿಸುವ ಕೆಲಸ ಮಾಡಿಸಲು ಇವರಿಗೆ ಆಗಲಿಲ್ಲ. ಅವರ ಪಟಾಲಂ ಜಿಲ್ಲೆಯಲ್ಲಿ ಎಲ್ಲಿ ಕ್ವಾರೆ ನಡೀತಿದೆ ಎಂದು ನೋಡಿ ಬರೋ ಕೆಲಸ ಮಾಡ್ತಿದ್ದಾರೆ.
ಇವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ವಸ್ತುಗಳು ಸಿಗದೆ ಜಿಲ್ಲೆಯ ಅಭಿವೃದ್ಧಿ ಆಗ್ತಿಲ್ಲ. ಅಧಿಕಾರಿಗಳಿಗೆ ಹೆದರಿಸುತ್ತ ದಲ್ಲಾಳಿ ಕೆಲಸ ಮಾಡ್ತಿದ್ದಾರೆ. ಇವರಿಗೆ ಸ್ವಲ್ಪನಾದ್ರೂ ಮರ್ಯಾದೆ ಇದ್ರೆ ಇದನ್ನ ನಿಲ್ಲಿಸಬೇಕು ಎಂದರು.
ವ್ಯಾಪಾರ ಮಾಡಲು ಹೋಗಿದ್ರಾ
ಮೇಲುಕೋಟೆಯಲ್ಲಿ ಸುಮಲತಾ ಆಣೆ, ಪ್ರಮಾಣಕ್ಕೆ ಜೆಡಿಎಸ್ ಶಾಸಕರನ್ನು ಆಹ್ವಾನಿಸಿದ್ದ ವಿಚಾರಕ್ಕೆ ಗರಂ ಆದ ರವೀಂದ್ರ ಶ್ರೀಕಂಠಯ್ಯ, ಏಟ್ರಿಯಾ ಹೋಟೆಲ್ ನಲ್ಲಿ ವ್ಯಾಪಾರ ಮಾಡಲು ಯಾರು ಹೋಗಿ ಕುಳಿತಿದ್ರು? ಏನಕ್ಕೆ ಕಳಿಸಿದ್ರು ಅವರ ಬೆಂಬಲಿಗರನ್ನ? ಸುಮ್ಮನೆ ಕಳಿಸಿದ್ರಾ? ಬೆಂಗಳೂರಿನ ಏಟ್ರಿಯಾ ಹೋಟೆಲ್ ಗೆ ವ್ಯಾಪಾರ ಮಾಡಲು ಇವರ ಬೆಂಬಲಿಗರನ್ನ ಕಳುಹಿಸಿ ನಂತರ ಸಿಲುಕಿಕೊಂಡ ಮೇಲೆ ಚೆಕ್ ಮಾಡಲು ಕಳುಹಿಸಿದ್ದೆ ಅಂದರು.
ಇಂತಹವರು ಆಣೆ, ಪ್ರಮಾಣ ಬೇರೆ ಮಾಡ್ತಿನಿ ಅಂತಾರಾ? ಅವರ ಆತ್ಮ ಗೌರವಕ್ಕೆ ಒಪ್ಪುವಂತ ಕೆಲಸ ಮಾಡಬೇಕು. ಸುಮಲತಾ ಅವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನಾನು ಹೇಳ್ತಿಲ್ಲ, ಆದ್ರೆ ಅವರ ಸುತ್ತ ಇರುವವರು ಈ ರೀತಿ ದಲ್ಲಾಳಿಗಳ ಕೆಲಸ ಮಾಡ್ತಿದ್ದಾರೆಂದು ಆರೋಪಿಸಿದರು.