ಕೆ.ಆರ್.ಪೇಟೆ ತಾಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ, ನಿಮ್ಮ ಮನೆ ಮಗನಂತೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ನಾನು ಪುಣ್ಯಕೋಟಿಯಂತೆ ತಾಲ್ಲೂಕಿನಲ್ಲಿ ನಿಮ್ಮ ಕೆಲಸ ಮಾಡುತ್ತೇನೆ ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು.
ಕೆ.ಆರ್.ಪೇಟೆ ತಾಲ್ಲೂಕಿನ ದೊಡ್ಡಕ್ಯಾತನಹಳ್ಳಿ ಗ್ರಾಮದ ರಾಮದೇವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೊಡ್ಡಕ್ಯಾತನಹಳ್ಳಿ, ಸಂತೇಬಾಚಹಳ್ಳಿ, ರಂಗನಾಥಪುರ-ಹರಪನಹಳ್ಳಿ ಕ್ರಾಸ್ ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಮತಯಾಚನೆ ಮಾಡಿ ಮಾತನಾಡಿದರು.
ಬಿಲ್ಲೇನಹಳ್ಳಿ ಗ್ರಾಮಕ್ಕೆ ತೆರಳಿ ಜೆಡಿಎಸ್ ಮುಖಂಡ ರಾಜಾಹುಲಿ ದಿನೇಶ್ ಮನೆಗೆ ಭೇಟಿ ನೀಡಿ ಬಿಜೆಪಿ ಪಕ್ಷ ಸೇರಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಾರಾಯಣಗೌಡರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರದಲ್ಲಿಯೇ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಪಕ್ಷ ಸೇರಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ದುಡಿದು ನಾರಾಯಣಗೌಡರಿಗೆ ವಿಜಯಮಾಲೆ ತೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದ ರಾಜಾಹುಲಿ ದಿನೇಶ್ ತಿಳಿಸಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಘಲಯ ಎ.ಎಸ್.ಶ್ರೀಧರ್, ಬಿಲ್ಲೇನಹಳ್ಳಿ ಕುಮಾರ್, ಬೂಕನಕೆರೆ ಜವರಾಯಿಗೌಡ, ಮಾಳಗೂರು ಚಂದ್ರಶೇಖರ್, ನಾಯಕನಹಳ್ಳಿ ಮೊಗಣ್ಣಗೌಡ, ಸಂತೆಬಾಚಹಳ್ಳಿ ಮೋಹನ್, ಕ್ರಾಸ್ ಶಿವಣ್ಣ, ಜಯರಾಮೇಗೌಡರ ನೇತೃತ್ವದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಕೆ.ಆರ್.ಪೇಟೆ ತಾಲೂಕು ಪಂಚಾಯತಿ ಮಾಜಿ ಸದಸ್ಯ ರಾಜಾಹುಲಿ ದಿನೇಶ್ ಹಾಗೂ ಶಾಸಕರಾದ ನಾರಾಯಣಗೌಡ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದು ಗುರು-ಶಿಷ್ಯರಂತಿದ್ದರು. ಆದರೆ ಕಾಲಕಳೆದಂತೆ ಗುರುಶಿಷ್ಯರು ಬದ್ಧವೈರಿಗಳಾಗಿ ಬದಲಾಗಿದ್ದರು. ಇಂದು ಚುನಾವಣಾ ಪ್ರಚಾರದ ವೇಳೆ ಬಿಲ್ಲೇನಹಳ್ಳಿ ಗ್ರಾಮಕ್ಕೆ ಮತ ಪ್ರಚಾರಕ್ಕೆ ಹೋಗಿದ್ದ ಸಚಿವ ನಾರಾಯಣಗೌಡ ಅವರು ತಮ್ಮ ಶಿಷ್ಯ ರಾಜಾಹುಲಿ ದಿನೇಶ್ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸಿ, ತಮ್ಮ ಗೆಲುವಿಗೆ ದುಡಿಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಧ್ಯದಲ್ಲಿಯೇ ಬಿಜೆಪಿ ಪಕ್ಷಸೇರಿ ನಾರಾಯಣಗೌಡರ ಗೆಲುವಿಗೆ ಕಂಕಣತೊಟ್ಟು ದುಡಿಯುವುದಾಗಿ ರಾಜಾಹುಲಿದಿನೇಶ್ ಘೋಷಿಸಿದರು..