ನಿತ್ಯ ಸಚಿವ ಎಂದೇ ಖ್ಯಾತರಾಗಿದ್ದ ದಿವಂಗತ ಕೆ.ವಿ.ಶಂಕರಗೌಡರ ಧರ್ಮಪತ್ನಿ ಸುಶೀಲಮ್ಮ ಶಂಕರಗೌಡ(88) ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮಂಡ್ಯ ನಗರದ ಬಂದಿಗೌಡ ಬಡಾವಣೆಯಲ್ಲಿರುವ ನಿವಾಸದಲ್ಲಿ ನಿಧನರಾದರು.
ಸುಶೀಲಮ್ಮನವರು ವಯೋಸಹಜ ಅನಾರೋಗ್ಯದಿಂದ ಮೃತರಾಗಿದ್ದು, ಮೂವರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಗ ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಚೈತ್ರ ಬ್ರೊಚಿರಾ ಅವರನ್ನು ಅಗಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಯವರೆಗೆ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಬಂದಿಗೌಡ ಬಡಾವಣೆಯ ಒಂದನೇ ಕ್ರಾಸ್ ನಲ್ಲಿರುವ ನಿವಾಸದಲ್ಲಿ ಇರಿಸಲಾಗಿತ್ತು.
ನಂತರ ಸುಶೀಲಮ್ಮ ಶಂಕರಗೌಡರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಕೀಲಾರಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಸಾರ್ವಜನಿಕರ ದರ್ಶನದ ನಂತರ ಮಧ್ಯಾಹ್ನ 2.30ರ ವೇಳೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಹೊನ್ನನಾಯಕನಹಳ್ಳಿ ಸಿಂಗ್ರೀಗೌಡರ ಪುತ್ರಿ ಸುಶೀಲಮ್ಮ ಅತ್ಯಂತ ಸರಳ ಸಜ್ಜನ ಸ್ವಭಾವದವರು. ಶಂಕರಗೌಡರ ಎಲ್ಲಾ ಜನಪರ ಕೆಲಸಗಳಿಗೆ ಹಿಂದೆ ನಿಂತು ಸಹಕಾರ ನೀಡಿದವರು. ಶಂಕರಗೌಡರ ರಾಜಕೀಯ ಏಳು ಬೀಳಿನಲ್ಲಿ ಸದಾ ಜೊತೆಗಿದ್ದ ಸುಶೀಲಮ್ಮನವರು ಹೃದಯವಂತರಾಗಿದ್ದರು.
ಕಾರ್ಯಕರ್ತರ ಪಾಲಿಗೆ ಅನ್ನಪೂರ್ಣಮ್ಮನಾಗಿದ್ದ ಸುಶೀಲಮ್ಮನವರು ಬಂದವರಿಗೆ ಉಪಹಾರ ನೀಡಿ ಉಪಚರಿಸುವುದರಲ್ಲಿ ಎತ್ತಿದ ಕೈ. ಶಂಕರಗೌಡರು ಮನಸ್ಸು ಮಾಡಿದರೆ ಸಾಕಷ್ಟು ಹಣ,ಆಸ್ತಿ ಮಾಡಬಹುದಿತ್ತು.
ಆದರೆ ಅವರೆಂದೂ ಹಾಗೆ ಮಾಡಲಿಲ್ಲ. ಜನರ ಮನಸ್ಸಿನಲ್ಲಿ ಉಳಿಯುವಂತ ಶಾಶ್ವತವಾದ ಕೆಲಸಗಳನ್ನು ಮಾಡಿ ಇಂದಿಗೂ ಜನರ ಬಾಯಲ್ಲಿ ನಿತ್ಯ ಸಚಿವ ಎಂದು ಕರೆಸಿಕೊಳ್ಳುತ್ತಾರೆ. ಅವರ ಪತ್ನಿ ಸುಶೀಲಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ತುಂಬು ಜೀವನ ಸಾಗಿಸಿ ಇಂದು ಕಾಲನ ಕರೆಗೆ ಓಗೊಟ್ಟು ಬದುಕಿನ ಯಾನ ಮುಗಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂಬುದು ಜನರ ಆಶಯ.