ಅಡ್ಡ ಕಾನೂನು ಬಳಸಿ ಪಿಂಚಣಿದಾರರನ್ನು ಬೆದರಿಸಲು ಬರಬೇಡಿ.ಎಲ್ಲರಿಗೂ ಪಿಂಚಣಿ ಸೌಲಭ್ಯ ದೊರಕಬೇಕು,ಅಲ್ಲಿಯ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಎನ್ಎಸಿ ಮುಖಂಡರು ಘೋಷಣೆ ಮಾಡಿದರು.
ಮಂಡ್ಯ ನಗರದ ರೈತ ಸಭಾಂಗಣದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ(ಎನ್ಎಸಿ) ನೇತೃತ್ವದಲ್ಲಿ 1995 ರ ನೌಕರರ ಪಿಂಚಣಿ ಯೋಜನೆಯ(ಇಪಿಎಸ್-95) ನಿವೃತ್ತ ನೌಕರರ ಪ್ರತಿಭಟನಾ ಸಮಾವೇಶ ನಡೆಯಿತು.
ಎನ್ಎಸಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವ್ ನೇತೃತ್ವದಲ್ಲಿ ಪಿಂಚಣಿ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ವಿಶ್ಲೇಷಣೆ,ಕನಿಷ್ಠ ಪಿಂಚಣಿ ₹7,500 ಮತ್ತು ಡಿ.ಎ(ತುಟ್ಟಿಭತ್ಯೆ), ವೈದ್ಯಕೀಯ ಸೌಲಭ್ಯ,ಪಿಂಚಣಿ ವಂಚಿತರಿಗೆ ಕನಿಷ್ಠ ₹5 ಸಾವಿರ ಪಿಂಚಣಿ ನೀಡುವ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆಗಳನ್ನು ನಡೆಸಲಾಯಿತು.
ನೌಕರರ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್ಒ) ಸಲ್ಲದ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ಉದ್ದೇಶಪೂರ್ವಕವಾಗಿ ದಾಖಲಿಸಿ ಲಕ್ಷಾಂತರ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ.ಅದೆಷ್ಟೋ ನೌಕರರು ಮತ್ತು ನಿವೃತ್ತ ನೌಕರರು ಇಂದಿಗೂ ಇಪಿಎಫ್ಒ ನಡೆಯನ್ನು ಶಪಿಸುತ್ತಿದ್ದಾರೆ.ಅಡ್ಡ ಕಾನೂನು ಬಳಸಿ ಪಿಂಚಣಿದಾರರನ್ನು ಬೆದರಿಸಲು ಸಾಧ್ಯವಿಲ್ಲ.ಎಲ್ಲರಿಗೂ ಪಿಂಚಣಿ ಸೌಲಭ್ಯ ದೊರಕಬೇಕು. ಅಲ್ಲಿಯ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಎನ್ಎಸಿ ಮುಖಂಡರು ಸಮಾವೇಶದಲ್ಲಿ ಎಚ್ವರಿಕೆ ನೀಡಿದರು.
ಹೊಸ ಪಿಂಚಣಿ ಯೋಜನೆ(ಎನ್ ಪಿ ಎಸ್)ಯಿಂದ ನಿವೃತ್ತ ನೌಕರರಿಗೆ ಯಾವ ಭದ್ರತೆಯೂ ಇಲ್ಲ.ಇಳಿಗಾಲದಲ್ಲಿ ಬರುವ ಪಿಂಚಣಿ ಯಾವುದಕ್ಕೂ ಸಾಲುವುದಿಲ್ಲ.ಆದ್ದರಿಂದ ಈ ಹಿಂದಿದ್ದ ಹಳೇ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸುವಂತೆ ಒತ್ತಾಯಿಸಲು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಮಾವೇಶದಲ್ಲಿ ದಕ್ಷಿಣ ಭಾರತ ಸಂಯೋಜಕ ರಮಕಾಂತ ನರಗುಂದ, ಕರ್ನಾಟಕ ಅಧ್ಯಕ್ಷ ಜಿಎಸ್ಎಂ ಸ್ವಾಮಿ, ಐಟಿ ನಿರ್ದೇಶಕ ಸಿ.ಎಸ್. ಮಂಜುನಾಥ್, ಕೆಎಸ್ ಆರ್ ಟಿ ಸಿ ಅಧ್ಯಕ್ಷ ನಂಜುಂಡೇಗೌಡ, ಖಜಾಂಚಿ ಎಸ್. ಎನ್.ಕುಲಕರ್ಣಿ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಶೋಭಾ ಅರಸು, ಮಂಡ್ಯ ಜಿಲ್ಲಾ ಕಾರ್ಯದರ್ಶಿ ಹುಚ್ಚಪ್ಪ ಸಮಾವೇಶದಲ್ಲಿ ಭಾಗವಹಿಸಿದ್ದರು.