ರಾಜಕಾರಣದಲ್ಲಿ ಜನಕಲ್ಯಾಣ ಚಿಂತನೆ ಇರಬೇಕೆಂದು ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.
ಮಂಡ್ಯ ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಮಂಡ್ಯ ಜಿಲ್ಲೆ ಬಿ.ವೈ.ವಿಜಯೇಂದ್ರಣ್ಣ ಅಭಿಮಾನಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಹುಟ್ಟುಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣ ವ್ಯಾಪಾರಿಕರಣ ಆಗಬಾರದು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೀತಿ ಅವರ ಸುಪುತ್ರರು ನಡೆದು ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡುವ ಮೂಲಕ ಜನಪರವಾಗಿ ನಿಂತಿದ್ದಾರೆ ಎಂದರು.
ಬಿ.ವೈ.ರಾಘವೇಂದ್ರ ಅವರು ಜನರ ಅಭಿವೃದ್ಧಿ, ಕೌಶಲ್ಯ ತರಬೇತಿ, ಆಧುನಿಕ ತಂತ್ರಜ್ಞಾನ ಅಳವಡಿಸಿ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಜನಪ್ರತಿನಿಧಿಗಳಿಗೆ ಕನಸು ಕಾಣುವ ಹಂಬಲವಿದ್ದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ.ಅಂತಹ ನಿಟ್ಟಿನಲ್ಲಿ ರಾಘವೇಂದ್ರ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದಗಾಲು ಎನ್.ಶಿವಣ್ಣ ಮಾತನಾಡಿ, ಸಂಸದ ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಅನುದಾನ ತಂದು ಶಿವಮೊಗ್ಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡು ಕಣ್ಮಣಿಗಳನ್ನ ರಾಜ್ಯಕ್ಕೆ ಕೊಟ್ಟು ಯುವಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾಡಿನ ಸೇವೆ ಮಾಡುವ ಅವಕಾಶ ಅವರಿಗೆ ಸಿಗಲಿ ಎಂದು ಹೇಳಿದರು.
ಮೈಸೂರು ಮೇಯರ್ ಸುನಂದ ಪಾಲನೇತ್ರ, ನವೀನ ಪಟೇಲ್, ಕೀಲಾರ ಚನ್ನೇಗೌಡ, ನವನೀತ್ ಗೌಡ, ಸಿದ್ದರಾಜು, ಮೋಹನ್ ಇತರರು ಹಾಜರಿದ್ದರು.