ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೇವಾ ಕಾರ್ಯ ಮಾಡಿದರೆ ನನಗೆ ನೆಮ್ಮದಿಯಾಗುತ್ತದೆ ಎಂದು ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷ ವೆಂಕಟೇಶ್ ಹೇಳಿದರು.
ಮಂಡ್ಯನಗರದ ಹಳೇ ನಗರದ ಸರ್ಕಾರಿ ಶಾಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಬಳಗ, ಧ್ವನಿ ಮಹಿಳಾ ಸಂಸ್ಥೆ ಮದ್ದೂರು ಸಹಯೋಗದಲ್ಲಿ ನಡೆದ ಸಿನಿಮಾ ನಾಯಕ ನಟಿ-ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಹುಟ್ಟಹಬ್ಬ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ತೆಂಗಿನ ಸಸಿ ಹಾಗೂ ಔಷಧ ವಿತರಣೆ, ಯೋಧರು ಹಾಗೂ ಶಿಕ್ಷಕರ ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಸರ್ಕಾರಿ ಶಾಲಾ ಮಕ್ಕಳ ಸಮ್ಮುಖದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಸೇವಾಕಾರ್ಯ ಮಾಡುವುದರ ಮೂಲಕ ಆಚರಿಸುತ್ತಿದ್ದೇವೆ, ಕಳೆದ ಬಾರಿ ಅನಾಥಮಕ್ಕಳಿಗೆ ಪೌಷ್ಠಿಕಾಹಾರ ವಿತರಣೆ-ಗೀತಗಾಯನ ಕಾರ್ಯಕ್ರಮದ ಮೂಲಕ ಆಚರಿಸಿದ್ದೇವು ಎಂದು ನುಡಿದರು.
ದುಡಿದ ಹಣದಲ್ಲಿ ಸ್ವಲ್ಪ ಉಳಿಸಿ, ನನ್ನ ನೆಚ್ಚಿನ ಕನ್ನಡ ಸಿನಿಮಾದ ನಾಯಕ ನಟಿ-ನಿರ್ಮಾಪಕಿ ರಾಧಿಕಾಕುಮಾರಸ್ವಾಮಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇನೆ, ನನಗೆ ಯಾವುದೇ ಆಸೆ-ಆಮಿಷ ಇಲ್ಲ, ಯಾವುದೇ ಫಲಾಪೇಕ್ಷೆಗಾಗಿ ಆಚರಣೆ ಮಾಡುತ್ತಿಲ್ಲ, ಅಭಿಮಾನದ ಸಂಕೇತವಾಗಿ ಸೇವಾಕಾರ್ಯ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾಡದೇವತೆ ಚಾಮುಂಡೇಶ್ವರಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಆಯುಶ್ ಆರೋಗ್ಯ ನೀಡಿ, ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಮತ್ತಷ್ಟು ಶಕ್ತಿ ನೀಡಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧ್ವನಿ ಮಹಿಳಾ ಸಂಸ್ಥೆ ಅಧ್ಯಕ್ಷೆ ರಜನಿರಾಜ್, ಜನವಾದಿ ಮಹಿಳಾ ಸಂಘಟನೆ ತಾ.ಅಧ್ಯಕ್ಷೆ ಲತಾ, ನಗರಸಭಾ ಸದಸ್ಯೆ ಮಂಜುಳಾ, ಲವ ಮಂಜು, ಮುಖ್ಯಶಿಕ್ಷಕ ಬಿ.ಕೆ. ನಾಗರಾಜು, ಶಿಕ್ಷಕರಾದ ರಾಘವೇಂದ್ರಭಟ್, ಶ್ವೇತಾ ಇದ್ದರು.