ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದು, ಬುಡಕಟ್ಟು ಸಮುದಾಯದವರಿಗೆ ಸೇರಿದ ಭೂಮಿಯನ್ನು ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ನೀಡಿದೆ ಎಂದರು.
ಜಾರ್ಖಂಡ್ನ ಚೈಬಾಸಾದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮಗೆ ಮತ ನೀಡಿ ಅಧಿಕಾರಕ್ಕೆ ತಂದರೆ ಕೋಟ್ಯಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಮತ್ತು ಬುಡಕಟ್ಟು ಜನರು, ಬಡವರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಉಳಿಸಬೇಕಾಗಿದೆ.ಭಾರತ ಒಕ್ಕೂಟದ ನಾಯಕರು ಸಂವಿಧಾನವನ್ನು ಉಳಿಸಲು ತಮ್ಮ ಜೀವವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ತಿಳಿಸಿದರು.
“ಪ್ರಧಾನಿ ಬುಡಕಟ್ಟು ಜನರ ಭೂಮಿಯನ್ನು 14 ರಿಂದ 15 ಕೈಗಾರಿಕೋದ್ಯಮಿಗಳಿಗೆ ನೀಡಲು ಬಯಸಿದ್ದಾರೆ. ಈಗಾಗಲೇ ಕಳೆದ 10 ವರ್ಷದ ಅವಧಿಯಲ್ಲಿ 22 ಮಂದಿಯನ್ನು ಬಿಲೇನಿಯರ್ಗಳಾಗಿ ಮಾಡಿದ್ದಾರೆ. ತಮಗೆ ಅಧಿಕಾರ ನೀಡಿದರೆ ಕೋಟ್ಯಂತರ ಜನರನ್ನು ಲಕ್ಷಾಧೀಶರನ್ನಾಗಿ ಮಾಡಲಿದ್ದು, ಬಡ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರೂ. ನೀಡುವುದಾಗಿ ತಿಳಿಸಿದರು.
ಪದವಿ ಹಾಗೂ ಡಿಪ್ಲೊಮೊ ಪಡೆದ ನಿರುದ್ಯೋಗಿ ಯುವಕರಿಗೆ ಒಂದು ವರ್ಷ ವೇತನ ಸಹಿತ ಉದ್ಯೋಗ ತರಬೇತಿ ನೀಡುವ ಭರವಸೆಯನ್ನು ರಾಹುಲ್ ಗಾಂಧಿ ನೀಡಿದರು.
“ಇಂದು ಮೂರನೇ ಹಂತದ ಚುನಾವಣೆ ನಡೆಯಲಿದೆ.ದೊಡ್ಡ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ ನಿಮ್ಮ ಹಕ್ಕುಗಳನ್ನು ರಕ್ಷಿಸಬೇಕೆಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಇದು ಸಾಮಾನ್ಯ ಚುನಾವಣೆಯಲ್ಲ, ಇದು ಸಂವಿಧಾನ ಹಾಗೂ ದೇಶದ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಚುನಾವಣೆಯಾಗಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ತಿಳಿಸಿದ್ದರು.