ಭಾನುವಾರ ಮುಂಜಾನೆ 6 ಗಂಟೆಗೆ ನಡೆದ ಮಂಡ್ಯ ಮ್ಯಾರಥಾನ್ ಸ್ಪರ್ಧೆಯಲ್ಲಿ ವಿವಿಧೆಡೆಯಿಂದ ಬಂದಿದ್ದ ಸ್ಪರ್ಧಿಗಳು ಮಳೆ ಚಳಿಯನ್ನೂ ಲೆಕ್ಕಿಸದೇ ಭಾಗವಹಿಸಿದ್ದರು.
ಕಾಯಕಯೋಗಿ ಫೌಂಡೇಶನ್ ಮಂಡ್ಯದ ಪ್ರವಾಸಿಮಂದಿರದಿಂದ ಬೇವಿನಹಳ್ಳಿ ಗ್ರಾಮದವರೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಮಂಡ್ಯ ಮ್ಯಾರಥಾನ್ ಓಟಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಾಲೆ, ಕಾಲೇಜು, ಎನ್ಸಿಸಿ, ಎನ್ಎಸ್ಎಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ‘ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು’ ಘೋಷಣೆಯೊಂದಿಗೆ ಸುರಿವ ಮಳೆಯಲ್ಲೇ ದಾಪುಗಾಲು ಹಾಕಿದರು.
ಅನಿಲ್ ಕುಮಾರ್ ಹಾಗೂ ಅರ್ಚನ ಪ್ರಥಮ
5 ಕಿ.ಮೀ. ಓಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೈಸೂರಿನ ಕ್ರೀಡಾಪಟುಗಳಾದ ಅನಿಲ್ಕುಮಾರ್(ಪ್ರಥಮ) ಮಣಿಕಂಠ (ದ್ವಿತೀಯ) ಹಾಗೂ ರಾಹುಲ್(ತೃತೀಯ) ಸ್ಥಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ಮೈಸೂರಿನ ಕೆ.ಎಂ.ಅರ್ಚನ(ಪ್ರಥಮ), ಎಂ.ಕೆ.ಚಿಕ್ಕಮ್ಮ(ದ್ವಿತೀಯ) ಹಾಗೂ ಮಂಡ್ಯದ ಪುಣ್ಯಶ್ರೀ(ತೃತೀಯ) ಸ್ಥಾನ ತಮ್ಮದಾಗಿಸಿಕೊಂಡರು.
ಹಿರಿಯರ ವಿಭಾಗದಲ್ಲಿ ಮೈಸೂರಿನ ಹರೀಶ್ (ಪ್ರಥಮ), ಲಕ್ಷ್ಮೀಶ್(ದ್ವಿತೀಯ) ಬೇವಿನಹಳ್ಳಿ ಗ್ರಾಮದ ರಾಜು ಎಂ.(ತೃತೀಯ) ಸ್ಥಾನ ಪಡೆದುಕೊಂಡರು.
ನಗದು ಬಹುಮಾನ
ಮ್ಯಾರಥಾನ್ ಓಟದಲ್ಲಿ ವಿಜೇತರಿಗೆ ಕ್ರಮವಾಗಿ 10 ಸಾವಿರ, 7,500 ರೂ. ಮತ್ತು ತೃತೀಯ ಸ್ಥಾನ ಪಡೆದವರಿಗೆ 5,000 ನಗದು ಬಹುಮಾನದ ಚೆಕ್ ವಿತರಣೆ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 230ಕ್ಕೂ ಹೆಚ್ಚು ಮಂದಿ ಓಟಗಾರರು ಮ್ಯಾರಥಾನ್ ಓಟಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಮುಖಂಡ ಡಾ.ಎಂ.ಕೃಷ್ಣ, ಜೆಡಿಎಸ್ ಮಾಧ್ಯಮ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಕನ್ನಡಪರ ಹೋರಾಟಗಾರ ಅನಿಲ್ಕುಮಾರ್, ಕಿರುತೆರೆ ನಟಿ ಸುಧಾರಾಣಿ, ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಡಾ.ಮಾದೇಶ್, ತ್ರಿಭುವನ್, ಭೀಮೇಶ್ ಓಟಕ್ಕೆ ಕನ್ನಡಭಾವುಟ ಬೀಸಿ ಚಾಲನೆ ನೀಡಿದರು.