ಮಠದ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಸ್ವಾಮೀಜಿ ಯೊಬ್ಬರ ರಕ್ಷಣೆಗೆ ಸರ್ಕಾರ ಹಾಗೂ ಮುಖ್ಯಮಂತ್ರಿಗಳೇ ನಿಂತಿದ್ದು, ಪರೋಕ್ಷವಾಗಿ ಮುರುಘಾ ಮಠದ ಶಿವಯೋಗಿ ಶರಣರ ಪರವಾಗಿ ಸರ್ಕಾರ ವಕಾಲತ್ತು ವಹಿಸಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಆರೋಪಿಸಿ ಕಿಡಿಕಾರಿದರು.
ಮಂಡ್ಯನಗರದಲ್ಲಿ ಸೋಮವಾರ ವಿವಿಧ ಮಹಿಳಾ ಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ‘ಅತ್ಯಾಚಾರ ವಿರೋಧಿ ಆಂದೋಲನ’ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತ್ಯಾಚಾರದ ಆರೋಪ ಎದುರಿಸುತ್ತಿರುವ ಸ್ವಾಮೀಜಿಯೊಬ್ಬರ ಪರವಾಗಿ ಸ್ವತಃ ಮುಖ್ಯಮಂತ್ರಿಯೇ ”ನಮಗೆ ಸ್ವಾಮೀಜಿಗಳ ಮೇಲೆ ನಂಬಿಕೆ ಇದೆ” ಅಂತ ಹೇಳಿಕೆ ನೀಡಿದ್ರೆ ಏನರ್ಥ. ಒಬ್ಬ ಪ್ರಭಾವಿ ಸ್ವಾಮೀಜಿಯ ಬಗ್ಗೆ ಒಡನಾಡಿ ಸಂಸ್ಥೆಯ ಮೂಲಕ ದೂರು ನೀಡಿದ್ದರು. ಆದರೆ ಸಂತ್ರಸ್ಥ ಮಕ್ಕಳ ಪರವಾಗಿ ನಿಲ್ಲಬೇಕಾದ ಸರ್ಕಾರ, ಸ್ವಾಮೀಜಿಯ ಪರವಾಗಿ ಮಾತನಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದರು.
ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಹೆಣ್ಣು ಮಕ್ಕಳು ಪ್ರಭಾವಿ ಸ್ವಾಮೀಜಿಯೊಬ್ಬರ ಮೇಲೆ ಸುಮ್ಮನೇ ಇಂತಹ ಆರೋಪ ಹೊರಿಸಲು ಸಾಧ್ಯವೇ ? ಈ ಪ್ರಕರಣದಲ್ಲಿ ಸ್ವಾಮೀಜಿಯ ಮೇಲೆ ದೂರು ನೀಡಿದ ಸಂತ್ರಸ್ಥ ಹೆಣ್ಣು ಮಕ್ಕಳ ತಾಯಿಯನ್ನು ಯಾವ ಕಾರಣವನ್ನೂ ನೀಡದೇ ಸರ್ಕಾರ ಬಂಧಿಸಿ ಜೈಲಿನಲ್ಲಿಟ್ಟಿದೆ. ಹೆಣ್ಣು ಮಕ್ಕಳ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವುದು ಇಂದು ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.