ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಒಂದು ಲೀಟರ್ ಹಾಲಿಗೆ 1.75 ರೂ ಕಡಿತ ಮಾಡಿರುವ ಕ್ರಮ ಖಂಡನೀಯ ಮತ್ತು ರೈತ ವಿರೋಧಿಯಾಗಿದ್ದು. ಹಾಲು ಉತ್ಪಾದಕರ ಜೀವನದ ಗಾಯದ ಮೇಲೆ ಬರೆ ಎಳೆದಿದಂತಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮಳವಳ್ಳಿ ತಾಲೂಕು ಅಧ್ಯಕ್ಷ ಎನ್ ಎಲ್ ಭರತ್ ರಾಜ್ ತಿಳಿಸಿದ್ದಾರೆ
ಮಳವಳ್ಳಿ ಪಟ್ಟಣದ ಪ್ರಾಂತ ರೈತಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿಗಿರುವ ಬೆಲೆ ಹಾಲಿಗೆ ಸಿಗುತ್ತಿಲ್ಲ, ಒಂದು ಲೀಟರ್ ಮಜ್ಜಿಗೆಯನ್ನ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಒಂದು ಲೀಟರ್ ಹಾಲಿಗೆ ಕೇವಲ 30 ರುಪಾಯಿ ನೀಡುತ್ತಿರುವುದು ಖಂಡನೀಯ.
ಇತ್ತೀಚಿನ ದಿನಗಳಲ್ಲಿ ಪಶು ಆಹಾರದ ಬೆಲೆ ಗಗನಕ್ಕೆ ಏರುತ್ತಿದ್ದು ಹಸಿರು ಹುಲ್ಲು, ಒಣ ಹುಲ್ಲು ಇತರೆ ನಿರ್ವಹಣಾ ವೆಚ್ಚದಿಂದ ಹಾಲು ಉತ್ಪಾದಕರು ಕಂಗಾಲಾಗಿದ್ದಾರೆ. ಇದರಿಂದ ಜಿಲ್ಲೆಯ ಜೀವಾಳವಾಗಿರುವ ಹಾಲು ಉತ್ಪಾದಕರ ಬದುಕು ತತ್ತರವಾಗಿದೆ ಎಂದು ಹೇಳಿದರು.
ಅರ್ಧ ಗ್ಲಾಸ್ ನೀರು ಹಾಕಿದರೆ ಅಪರಾಧ ಎಂದು ಹಾಲನ್ನ ವಾಪಸ್ ಕಳಿಸುತ್ತಾರೆ, ಆದರೆ ಅರ್ಧ ಟ್ಯಾಂಕ್ ನೀರಾಕಿ ಅರ್ಧ ಟ್ಯಾಂಕ್ ಹಾಲಿಗೆ ಮಾರಾಟ ಮಾಡುವವರನ್ನು ಜನ ನಾಯಕರೆಂದು ಬಿಂಬಿಸುತ್ತಾರೆ. ಅಂತವರು ಶಾಸಕರು ಆಗಬಹುದು, ಸಂಸದರು ಆಗಬಹುದು ಇದು ಈ ಜಿಲ್ಲೆಯ ದುಸ್ಥಿತಿ ಎಂದು ಬಣ್ಣಿಸಿದರು.
ಮನ್ ಮುಲ್ ನಲ್ಲಿ ನೇಮಕಾತಿ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ಜರುಗುತಿದೆ, ಮೇಗಾ ಡೈರಿ ಪ್ರಾರಂಭವಾದರೆ ಉತ್ತಮವಾದ ದರವನ್ನ ಹಾಲಿನ ಕೊಡುತ್ತೇವೆ ಎಂದು ಹೇಳಿದ ಆಡಳಿತ ಮಂಡಳಿಯವರು, ಈ ರೀತಿ ಹಾಲಿನ ದರ ಕಡಿತ ಮಾಡಿ ಹಾಲು ಉತ್ಪಾದಕರ ಜೀವನವನ್ನ ನಾಶ ಮಾಡಲು ಹೊರಟಿರುವ ಕ್ರಮ ಖಂಡನೀಯ. ಹಾಗಾಗಿ ಮನ್ಮುನ್ ಆಡಳಿತ ಮಂಡಳಿ ಸರಿಯಾದ ರೀತಿಯಲ್ಲಿ ಆಡಳಿತ ನಡೆಸುವ ಮುಖಾಂತರ ರೈತರ ಹಿತವನ್ನು ಕಾಪಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್ ಲಿಂಗರಾಜು ಮೂರ್ತಿ, ಉಪಾಧ್ಯಕ್ಷರಾದ ಗುರುಸ್ವಾಮಿ, ಹಿಪ್ಜುಲ್ಲಾ, ಶಿವಕುಮಾರ್, ಮರಿಲಿಂಗೇಗೌಡ ಹಾಗೂ ಸತೀಶ್ ಇತರರು ಉಪಸಿತರಿದ್ದರು