ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಹೋರಾಟಗಾರರು ಮಂಡ್ಯದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಬಳಿ ಧರಣಿ ನಡೆಸುತ್ತಿದ್ದ ರೈತರು,ಕನ್ನಡಪರ, ಪ್ರಗತಿಪರ ಹೋರಾಟಗಾರರು ವಿಚಾರಣೆ ಮುಂದೂಡಿಕೆಯಾದ ವಿಚಾರ ತಿಳಿದು ಬೆಂಗಳೂರು -ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರು.
ನ್ಯಾಯಾಲಯದ ತೀರ್ಪು ಮೂರನೇ ಬಾರಿ ಮುಂದೂಡಿಕೆಯಾಗಿದೆ, ಈ ರೀತಿ ವಿಚಾರಣೆ ನಡೆಸದೆ ಇರುವುದು ಪ್ರತಿನಿತ್ಯ ನೀರು ಹರಿಸಲಿ ಎಂಬ ಕುತಂತ್ರವಾಗಿದೆ. ಈಗಾಗಲೇ ಜಲಾಶಯದಲ್ಲಿನ ಕುಡಿಯುವ ನೀರನ್ನು ಬಿಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಬದಿ ನೀರನ್ನು ಟ್ಯಾಂಕು ಗಳಲ್ಲಿ ತುಂಬಿ ತಮಿಳುನಾಡಿಗೆ ಕಳುಹಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಮುಖಂಡರಾದ ಸುನಂದಾ ಜಯರಾಂ, ಕೆ ಬೋರಯ್ಯ, ಗುರುಪ್ರಸಾದ್ ಕೆರಗೋಡು, ಮಾಜಿ ಶಾಸಕ ಜಿ ಬಿ ಶಿವಕುಮಾರ್, ಬೇಕ್ರಿ ರಮೇಶ್, ರೈತ ಸಂಘದ ಇಂಡುವಾಳು ಚಂದ್ರಶೇಖರ್,ಇ ಬಸವರಾಜ್, ಕನ್ನಡ ಸೇನೆ ಮಂಜುನಾಥ್, ತಗ್ಗಳ್ಳಿ ವೆಂಕಟೇಶ್ ಸೇರಿದಂತೆ ಮತ್ತಿತರರಿದ್ದರು.