Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳ ಮನವಿಗೆ ದಿಢೀರ್ ಸ್ಪಂದನೆ : ಸಿಇಓ ಕ್ರಮಕ್ಕೆ ಉಪಲೋಕಾಯುಕ್ತರಿಂದ ಶ್ಲಾಘನೆ!

ಅಧಿಕಾರಿಗಳು ಮನಸ್ಸು ಮಾಡಿದ್ರೆ ಕ್ಷಣ ಮಾತ್ರದಲ್ಲೇ ಕೆಲಸ ಆಗುತ್ತೆ ಅನ್ನೋದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆಯಿದೆ. ‘ವಿಶ್ವ ಪರಿಸರ’ ದಿನಾಚರಣೆ ಅಂಗವಾಗಿ ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದ ವೇಳೆ ಉಪಲೋಕಾಯುಕ್ತ, ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಗೂ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯಾ ಪ್ರಭು ಅವರ ಬಳಿ ತುಂಬಕೆರೆ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಔಷಧೀಯ ವನ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿಕೊಂಡರು.

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಜಿಪಂ ಸಿಇಓ ಅವರ ನಿರ್ದೇಶನದಂತೆ ಹನಕೆರೆ ಗ್ರಾಮ ಪಂಚಾಯಿತಿ, ಮಂಡ್ಯ ತಾಲ್ಲೂಕು ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಆಯುಷ್ ಇಲಾಖೆಗಳ ಸಹಯೋಗದಲ್ಲಿ ಕೇವಲ 24 ತಾಸಿನಲ್ಲಿ ಶಾಲಾ ಆವರಣದಲ್ಲಿ ಧನ್ವಂತರಿ ವನ ನಿರ್ಮಾಣವಾಗಿದೆ.

ಆಯುಷ್ ಇಲಾಖೆ ನೀಡಿದ ದೊಡ್ಡಪತ್ರೆ, ಹೊನಗೊನೆ, ಕಾಡುಬಸಳೆ, ಸರ್ಪಗಂಧ, ಅರಿಶಿಣ, ತುಳಸಿಯಂತಹ ಸುಮಾರು 50 ಔಷಧೀಯ ಸಸಿಗಳನ್ನು ನೆಡಲಾಗಿದೆ. ಇದೇ ವೇಳೆ ಪ್ರತಿಯೊಂದು ಸಸಿಯ ಉಪಯೋಗದ ಬಗ್ಗೆ ಆಯುಷ್ ಇಲಾಖೆ ವೈದ್ಯರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅಲ್ಲದೆ ತೋಟಗಾರಿಕೆ ಇಲಾಖೆಯು ತೆಂಗು, ಪಪ್ಪಾಯ, ನುಗ್ಗೆ, ನಿಂಬೆ ಸೇರಿದಂತೆ ಸುಮಾರು 30 ಸಸಿಗಳನ್ನು ನೀಡಿದ್ದು ಶಾಲಾ ಆವರಣದಲ್ಲಿ, ಪೌಷ್ಠಿಕ ತೋಟವನ್ನು ನಿರ್ಮಿಸಲಾಗಿದೆ.

ಶಾಲಾ ಆವರಣದಲ್ಲಿ ಧನ್ವಂತರಿ ವನ ಹಾಗೂ ಪೌಷ್ಠಿಕ ತೋಟ ನಿರ್ಮಾಣವಾಗಿರುವುದಕ್ಕೆ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಉಪಲೋಕಾಯುಕ್ತರಿಂದ ಶ್ಲಾಘನೆ

ವಿದ್ಯಾರ್ಥಿಗಳ ಮನವಿಗೆ ತಕ್ಷಣವೇ ಸ್ಪಂದಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿ ಶಾಲಾ ಆವರಣದಲ್ಲಿ ಧನ್ವಂತರಿ ವನ ನಿರ್ಮಾಣಕ್ಕೆ ಕ್ರಮವಹಿಸಿದ ಜಿಪಂ ಸಿಇಓ ಅವರ ಕಾರ್ಯವೈಖರಿಯನ್ನು ಉಪಲೋಕಾಯುಕ್ತ, ನ್ಯಾಯಮೂರ್ತಿ ಫಣೀಂದ್ರ ಅವರು ಶ್ಲಾಘಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!