ಮಾನವ ಹಕ್ಕು ಮತ್ತು ಮಾನವ ಮೌಲ್ಯ ಅತ್ಯಂತ ವಿಶೇಷವಾದಂತಹ ಕಾನೂನಾಗಿದ್ದು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಯಾವುದೇ ರೀತಿಯಲ್ಲೂ ದೈಹಿಕ ಅಥವಾ ಮಾನಸಿಕವಾಗಿ ನೋಯಿಸದಂತೆ ಜೀವನ ಮಾಡಬೇಕಾಗಿದೆ, ಇದನ್ನು ಎಲ್ಲರೂ ಪಾಲಿಸಬೇಕೆಂದು ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಸೊಸೈಟಿ ಲಿಮಿಟೆಡ್ ನಿರ್ದೇಶಕ ಎಂ. ಗುರುಪ್ರಸಾದ್ ಹೇಳಿದರು.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ದಿ ಪಾವಗಡ ಸೌಹಾರ್ಥ ಮಲ್ಟಿಪರ್ಪಸ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಮಂಡ್ಯ ಶಾಖೆ ಆವರಣದಲ್ಲಿ ಸೊಸೈಟಿ ಸಿಬ್ಬಂದಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನ ಎಲ್ಲಾ ಮಾನವರು ತಮ್ಮ ಹಕ್ಕುಗಳು ಉಲ್ಲಂಘನೆ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ, ಅನೇಕ ಭಾಗಗಳಲ್ಲಿ ಇತ್ತೀಚಿಗೆ ತಾರತಮ್ಯ ಜಾತಿಯತೆ ತಾಂಡವಾಡುತ್ತಿದ್ದು ಪ್ರತಿಯೊಬ್ಬ ಮನುಷ್ಯರು ‘ದಯವೇ ಧರ್ಮದ ಮೂಲವಯ್ಯ’ ಎಂಬಂತೆ ಧಾರ್ಮಿಕವಾಗಿ ಮಾನವೀಯ ಮೌಲ್ಯಗಳನ್ನು ಒಳಗೊಂಡಂತೆ ಶುದ್ಧ ಕಾಯಕದಲ್ಲಿ ನಿರತರಾದಾಗ ಮಾತ್ರ ಮಾನವ ಹಕ್ಕುಗಳು ಉಲ್ಲಂಘನೆ ಯಾಗಲು ಸಾಧ್ಯವಿಲ್ಲ ಎಂದರು.
ಸೊಸೈಟಿ ವೃತ್ತಿಪರ ನಿರ್ದೇಶಕ ಬಿ. ಎಸ್. ರಾಮಲಿಂಗರೆಡ್ಡಿಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕ ಕೆ. ಗುಂಡಪ್ಪ, ಜಿ.ಎನ್. ರಾಜು ಮಾತನಾಡಿದರು. ಮಂಡ್ಯ ಜಿಲ್ಲಾ ಶಾಖೆ ವ್ಯವಸ್ಥಾಪಕ ಬೋರೇಶ್ ಮತ್ತು ಜಯಶಂಕರ್ ಶೆಟ್ಟಿ, ಸೊಸೈಟಿ ಡೆವಲಪ್ಮೆಂಟ್ ಅಧಿಕಾರಿ ಶ್ರೀನಿವಾಸ್ ,ಒಳಗೊಂಡಂತೆ ವಿವಿಧ ಶಾಖೆಯ ವ್ಯವಸ್ಥಾಪಕರು ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಜರಿದ್ದರು. ಸಿಬ್ಬಂದಿಗಳಿಗೆ ಸಾಫ್ಟ್ವೇರ್ ತರಬೇತಿಯನ್ನು ಅರ್ಜುನ್ ಶ್ರೀನಿವಾಸ್ ನೀಡಿದರು.