ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ 93 ಕ್ಷೇತ್ರಗಳ ಟಿಕೆಟ್ (ಬಿ.ಫಾರಂ)ಅನ್ನು ವಿಧಾನಸಭಾ ಚುನಾವಣೆಗೂ ಐದು ತಿಂಗಳ ಮೊದಲೇ ಘೋಷಣೆ ಮಾಡುವ ಮೂಲಕ ಜೆಡಿಎಸ್ ವರಿಷ್ಠರು ತಂತ್ರಗಾರಿಕೆ ಬದಲಾವಣೆ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಇದುವರೆಗೂ ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಟಿಜೆಟ್ ಅನ್ನು (ಬಿ.ಫಾರಂ) ದೊಡ್ಡಗೌಡರು ನಾಮಪತ್ರ ಸಲ್ಲಿಸಲು ಇರುವ ಕೊನೆಯ ಕ್ಷಣದವರೆಗೂ ಖಚಿತ ಮಾಡದೆ ಎಲ್ಲಾ ಆಕಾಂಕ್ಷಿತರನ್ನು ಮಾತನಾಡಿಸುತ್ತ, ಸಮಾಧಾನ ಪಡಿಸುತ್ತ ಕೊನೆಯ ಕ್ಷಣದಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದನ್ನು ವಾಡಿಕೆ ಮಾಡಿಕೊಂಡಿದ್ದರು.
ಆದರೆ ಈ ಬಾರಿ ಜೆಡಿಎಸ್ ಇದಕ್ಕೆ ತದ್ವಿರುದ್ಧವಾಗಿ ತಂತ್ರಗಾರಿಕೆ ಮಾಡಿ ಬಹಳ ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.ಇದು ಘೋಷಿತ ಅಭ್ಯರ್ಥಿಗಳು ಕ್ಷೇತ್ರದಲ್ಲಿ ನುಗ್ಗಿ ಸಂಘಟನೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿರುವಂತೆಯೇ, ಬಂಡಾಯಗಾರರು ತಮಗಿಷ್ಟವಾದ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಳ್ಳಲು ಸಹ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಜಿಲ್ಲೆಯಾದ್ಯಂತ ಕಾರ್ಯಕರ್ತರು ನಡುವೆ ಚರ್ಚೆಯಾಗುತ್ತಿದೆ.
ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಈ ನಡೆಯ ಹಿಂದೆ ಯಾವುದೋ ತಂತ್ರಗಾರಿಕೆ ಇದೆ ಎಂದು ಜಿಲ್ಲೆಯ ಜೆಡಿಎಸ್ ಮುಖಂಡರು,ಕಾರ್ಯಕರ್ತರು ವಾದ.ಎಲ್ಲರ ಬಾಯಲ್ಲೂ ಮಂಡ್ಯ ಕ್ಷೇತ್ರದಿಂದ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿರುವುದರ ಹಿಂದೆ ಯಾವ ತಂತ್ರಗಾರಿಕೆ ಇದೆ ಎಂಬ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.