ರಾಜ್ಯದಾದ್ಯಂತ ಹಿಜಾಬ್ ವಿಚಾರವಾಗಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಸಂಘಟನೆಯಿಂದ ಸುತ್ತುವರೆಯಲ್ಪಟ್ಟಾಗ, ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ಮಂಡ್ಯದ ಪಿಇಎಸ್ ವಿದ್ಯಾರ್ಥಿನಿ ಮುಸ್ಕಾನ್ ವಿದೇಶಕ್ಕೆ ಯಾಮಾರಿಸಿ ಹೋಗಿದ್ದಾರೆ, ಪೋಲೀಸರಿಗೆ ಮಾಹಿತಿ ಕೊಡದೆ ವಿದೇಶಕ್ಕೆ ಹಾರಿದ್ದಾರೆ ಎಂಬ ವಿಷಯವು ಸುದ್ದಿ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಕೆಲವು ಕನ್ನಡ ವೆಬ್ ಸೈಟ್ ನ್ಯೂಸ್ ಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ವಿದೇಶಕ್ಕೆ ಹಾರಿದ ವಿದ್ಯಾರ್ಥಿನಿ ಮುಷ್ಕಾನ್; ಉಗ್ರಗಾಮಿಗಳ ಭೇಟಿ ಸಂಚು ಇದೆಯಾ? ಎಂದು ಪ್ರಕಟಿಸಿದೆ.
ವಾಸ್ತವದಲ್ಲಿ ಮುಸ್ಕಾನ್ ಮತ್ತು ಅವರ ಕುಟುಂಬ ರಂಜಾನ್ ಸಮಯದಲ್ಲೇ ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮಕ್ಕಾಗೆ ತೀರ್ಥ ಯಾತ್ರೆಗೆ ಹೋಗಿರುವುದು ವರದಿಯಾಗಿದೆ.
ಆದರೆ ಅವರು ಪೊಲೀಸರನ್ನು ಯಾಮಾರಿಸಿ ಹೋಗಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ, “ಹೊರ ದೇಶಕ್ಕೆ ಹೋಗುವ ನಿಯಮದಂತೆ, ಕಾನೂನು ಬದ್ದವಾಗಿಯೇ ಮುಸ್ಕಾನ್ ಅವರ ಕುಟುಂಬ ವಿದೇಶಕ್ಕೆ ಹೋಗಿದೆ. ಪೊಲೀಸರಿಗೆ ಯಾಮಾರಿಸಿ, ಹೇಳದೆ ಕೇಳದೆ, ಯಾರದೇ ಕಣ್ಣು ತಪ್ಪಿಸಿ ಹೋಗಿಲ್ಲ” ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.