ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ನಿರೀಕ್ಷೆಗೂ ಮೀರಿದ ಹಂತರದೊಡನೆ ಗೆಲುವು ದಾಖಲಿಸಿದ್ದು ಪಕ್ಷದ ಮುಖಂಡರು, ಕಾರ್ಯಕರ್ತರ ಉತ್ಸಾಹ ಮೇರೆಮೀರಿತ್ತು
ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನೂತನ ಶಾಸಕ ಕೆ.ಎಂ. ಉದಯ್ ಅವರ ಗೆಲುವು ಖಾತರಿಯಾಗುತ್ತಿದ್ದಂತೆ ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಪಟಾಕಿ ಸಿಡಿಸುವ ಜತೆಗೆ ಸಿಹಿ ವಿತರಿಸಿ ವಿಜಯ ಸಂಭ್ರಮ ಆಚರಿಸಲಾಯಿತು.
ಸತತ ಎರಡು ಭಾರಿ ಜೆಡಿಎಸ್ ನಿಂದ ಗೆದ್ದು ಶಾಸಕರಾಗಿ ಕಳೆದ ಅವಧಿಯ ಆರಂಭದ 14 ತಿಂಗಳು ಸಾರಿಗೆ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದ ಮತ್ತು ಈ ಹಿಂದೆ ನೆರೆಯ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದಲೂ ಶಾಸಕರಾಗಿ ಒಟ್ಟು ನಾಲ್ಕು ಭಾರಿ ಶಾಸಕತ್ವ ಅನುಭವಿಸಿದ್ದ ಡಿ.ಸಿ. ತಮ್ಮಣ್ಣ ಭಾರಿ ಅಂತರದಿಂದ ಸೋಲೊಪ್ಪುವ ಮೂಲಕ ಜೆಡಿಎಸ್ ಪಕ್ಷದ ಪಾಳಯದಲ್ಲಿ ಸೂತಕದ ವಾತಾವರಣ ಕಂಡು ಬಂದಿತು.
ಹ್ಯಾಟ್ರಿಕ್ ಗೆಲುವಿನೊಡನೆ ದಾಖಲೆ ನಿರ್ಮಾಣಕ್ಕೆ ಮುಂದಾಗಿದ್ದ ಹಾಗೂ ರಾಜ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪೈಕಿ ಹಿರಿಯ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ (82) ಗೆಲುವಿಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತಿತರ ಪ್ರಭಾವಿಗಳು ಕ್ಷೇತ್ರದಲ್ಲಿ ಪಕ್ಷದ ಪರ ನಡೆಸಿದ ಮತಯಾಚನೆ ಫಲ ನೀಡದಂತಾಯಿತು.
ಕೋವಿಡ್ನ ಆರಂಭದ ದಿನದಿಂದಲೂ ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಪಾರ ಸಂಗಡಿಗರ ಒಳಗೂಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕೆ.ಎಂ. ಉದಯ್ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಬಿ.ಫಾರಂಗಾಗಿ ಬಹು ನಿರೀಕ್ಷೆ ಹೊಂದಿದ್ದ ಎಸ್.ಎಂ. ಕೃಷ್ಣ ಅವರ ಕುಟುಂಬದ ಸದಸ್ಯ ಎಸ್. ಗುರುಚರಣ್ ಪಕ್ಷಾಂತರದ ನಡುವೆಯೂ ಗೆಲುವಿನ ನಗೆ ಬೀರಿ ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ನೀರೆರೆದರು.
ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಶಾಸಕರಿಲ್ಲದ ಮದ್ದೂರು ಕ್ಷೇತ್ರವು ಕೆ.ಎಂ. ಉದಯ್ ಅವರ ಗೆಲುವಿನೊಡನೆ ವಿಧಾನಸಭಾ ಕ್ಷೇತ್ರವನ್ನು ಈ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳು ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ದಿನೇಶ್ಗೂಳೀಗೌಡ, ಮಧು.ಜಿ.ಮಾದೇಗೌಡ ಆಯ್ಕೆಯೊಟ್ಟಿಗೆ ಮದ್ದೂರು ತಾಲೂಕಿನಲ್ಲಿ ಮೂರು ಕಾಂಗ್ರೆಸ್ ಶಾಸಕರಿಗೆ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ.