ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ.ಡಿ.ರಮೇಶ್ ರಾಜು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.ಅವರು ಪತ್ನಿ ಶಾರದ ಸೇರಿದಂತೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮಂಡ್ಯದ ಮಾಜಿ ಶಾಸಕ ಜೆ.ದೇವಯ್ಯ ಅವರ ಪುತ್ರರಾದ ಎಂ.ಡಿ. ರಮೇಶ ರಾಜು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಎಸ್.ಎಂ.ಕೃಷ್ಣರ ಗರಡಿಯಲ್ಲಿ ಪಳಗಿದ್ದ ಎಂ. ಡಿ.ರಮೇಶ್ ರಾಜ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಅಲ್ಲದೆ ಮೈಷುಗರ್ ಕಾರ್ಖಾನೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕೆರಗೋಡು ವಿಧಾನಸಭಾ ಕ್ಷೇತ್ರದಿಂದ 1994 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವ ಹೊಂದಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ಎಮ್. ಕೃಷ್ಣ ಅವರ ಕಟ್ಟ ಬೆಂಬಲಿಗರಾಗಿದ್ದ ರಮೇಶ್ ರಾಜು ಅವರನ್ನು ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಾ ಮಾಡಿದ್ದರು. ಮಂಡ್ಯದ ನಗರದ ಸ್ವರ್ಣಸಂದ್ರದಲ್ಲಿ ಶ್ರೀ ಆರಕೇಶ್ವರ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ
ಇಂದು ಮಧ್ಯಾಹ್ನ ಮೂರು ಗಂಟೆಗೆ ಹೊಳಲು ರಸ್ತೆಯಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನೂರಾರು ಗಣ್ಯರು ಮಂಡ್ಯದ ಸುಭಾಷ್ ನಗರದ ಎರಡನೇ ಕ್ರಾಸ್ ನಲ್ಲಿರುವ ರಮೇಶ್ ರಾಜು ಅಬರ ನಿವಾಸಕ್ಕೆ ನೂರಾರು ಗಣ್ಯರು ಹಾಗೂ ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.
ಸಂತಾಪ
ರಮೇಶ್ ರಾಜು ಅವರ ನಿಧನಕ್ಕೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಸಂತಾಪ ಸಲ್ಲಿಸಿದ್ದಾರೆ. ಎಸ್.ಎಂ.ಕೃಷ್ಣರವರ ಆಪ್ತ ಬೆಂಬಲಿಗರಾಗಿದ್ದ ರಮೇಶ್ ರಾಜು ಅವರು ಮೌಲ್ಯಯುತ ರಾಜಕಾರಣ ಮಾಡಿದರು.ಸರಳ,ಸಜ್ಜನಿಕೆಯ ವ್ಯಕ್ತಿ ಆಗಿದ್ದ ಅವರ ನಿಧನ ಅಪಾರ ನಷ್ಟ ತಂದಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.