ಸಮಾಜಕ್ಕೆ ಕೊಡುಗೆ ನೀಡಿದ ಹಿರಿಯ ನಾಗರೀಕರನ್ನು ಅವರ ಆತ್ಮಗೌರವಕ್ಕೆ ಚ್ಯುತಿ ಆಗದಂತೆ ಗೌರವದಿಂದ ನಡೆಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು ಹೇಳಿದರು.
ಮೈಸೂರು ಜಿಲ್ಲೆಯ ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ರಾಮಕೃಷ್ಣ ಆಶ್ರಮದ ತಾಯಿ ಮಡಿಲು ವೃದ್ಧಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಹೆಚ್.ಎಲ್. ನಾಗರಾಜು ಅವರ ಹುಟ್ಟುಹಬ್ಬದ ಅಂಗವಾಗಿ ವೃದ್ಧಾಶ್ರಮಕ್ಕೆ ವೀಲ್ ಚೇರ್ ವಿತರಣೆ ಮಾಡಿ ಅವರು ಮಾತನಾಡಿದರು.
ಹಿರಿಯ ನಾಗರೀಕರ ಋಣ ನಮ್ಮ ಮೇಲಿದೆ. ಅವರ ಆತ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅವರ ಋಣ ಮಕ್ಕಳಾದ ನಮ್ಮ ಮೇಲಿದೆ. ಪರಿಸರ ಕಾಳಜಿ ಇಟ್ಟುಕೊಂಡು ಈ ರೀತಿ ಸಮಾಜಮುಖಿ ಕೆಲಸ ಮಾಡುತ್ತಿರುವ ಕೌಶಲ್ಯ ಯುವತಿ ಮಂಡಳಿ ಜಿಲ್ಲೆಗೆ ಮಾದರಿಯಾಗಿದೆ. ಸಂಘ ಸಂಸ್ಥೆಗಳು, ಯುವತಿ ಮಂಡಳಿಗಳು ಸಮಾಜಸೇವಾ ಕಾರ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಲಂಕೇಶ್ ಮಂಗಲ ಮಾತನಾಡಿ, ಡಾ.ಹೆಚ್.ಎಲ್. ನಾಗರಾಜು ಅವರು ತಮ್ಮೊಳಗೆ ಸಮಾಜದಲ್ಲಿ ನಡೆದಾಡುವ ದೇವರಿದ್ದಂತೆ. ಅವರು ಸರಳ ಸಜ್ಜನಿಕೆಯ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ನಮ್ಮ ಸಮಾಜಮುಖಿ ಕೆಲಸಗಳಿಗೆ ಮತ್ತು ಯುವ ಸಮುದಾಯಕ್ಕೆ ಅವರೆ ಪ್ರೇರಣೆಯಾಗಿದ್ದಾರೆಂದರು.
ಉಪನ್ಯಾಸಕರಾದ ಡಾ.ಕೆಂಪಮ್ಮ ಮಾತನಾಡಿ, ಡಾ.ನಾಗರಾಜು ಅವರು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ. ಇಂತಹ ಕಾರ್ಯಕ್ರಮಗಳಿಂಗ ಪ್ರೇರಣೆ ಪಡೆದು ಹಲವು ಯುವಜನರು ತಮ್ಮ ಬದುಕು ರೂಪಿಸಿಕೊಂಡಿದ್ದಾರೆಂದು ತಿಳಿಸಿದರು.
ಆಶ್ರಮದ ಸ್ವಾಮೀಜಿ ಶ್ರೀನಾದನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಅಪರೂಪದ ವ್ಯಕ್ತಿತ್ವ ಹೊಂದಿರುವ ಅಧಿಕಾರಿಯೆಂದರೆ ಡಾ.ಹೆಚ್.ಎಲ್.ನಾಗರಾಜು. ಅವರ ಅನುಕರಣೆಯನ್ನು ಮಾಡಿ ಮಂಡ್ಯ ಜಿಲ್ಲೆಯಲ್ಲಿ ಯುವ ಜನತೆ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಡಾ.ಹೆಚ್.ಎಲ್. ನಾಗರಾಜು, ಲಂಕೇಶ್ ಮಂಗಲ ಹಾಗೂ ಕೌಶಲ್ಯ ಯುವತಿ ಮಂಡಳಿ ಅಧ್ಯಕ್ಷರಾದ ವಿಜಯ ನಾಗಣ್ಣ ಅವರನ್ನು ನಾದನಂದ ಸ್ವಾಮೀಜಿ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೌಶಲ್ಯ ಯುವತಿ ಮಂಡಳಿ ಕಾರ್ಯದರ್ಶಿ ಅರುಣ ಕೆಂಪರಾಜು, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತೆರಾದ ನಿರುಪಮಾ, ರೂಪ ಹಾಗೂ ಮಂಡಳಿಯ ಸದಸ್ಯರಿದ್ದರು.