ಸಂಸದ ಪ್ರತಾಪ್ ಸಿಂಹ ಅವರು ಬಿಜೆಪಿ ಪಕ್ಷದ ಹೆಸರನ್ನು ಬಳಸಿಕೊಂಡು ಮಹಿಷ ದಸರಾಗೆ ಅಡ್ಡಿ ಪಡಿಸುತ್ತಿದ್ದಾರೆ. ಈ ವಿಚಾರ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯೇ ಆಗಿಲ್ಲ. ಹಾಗಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಮಹಿಷ ದಸರಾಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ ಗಿರಿಧರ್ ಹೇಳಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ”ಸಂವಿಧಾನದಲ್ಲಿ ಅವರವರ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಹಿಷ ದಸರಾ ನಿಲ್ಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಲು ಯಾರು? ಈ ಇದು ಪ್ರತಾಪ್ ಸಿಂಹರ ವೈಯಕ್ತಿಕ ಹೇಳಿಕೆಯಷ್ಟೆ. ಈ ವಿಚಾರವಾಗಿ ಪಕ್ಷದ ಕೋರ್ ಕಮಿಟಿಯಲ್ಲಿ ತೀರ್ಮಾನವೇ ಆಗಿಲ್ಲ, ಶಾಸಕ ಶ್ರೀವತ್ಸ ಅವರಿಗೂ ಮಹಿಷ ದಸರಾ ವಿರೋಧ ಇಷ್ಟವಿಲ್ಲ, ತಲೆಹರಟೆ ಪ್ರತಾಪ್ ಸಿಂಹ ಅವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದ ಅವರು ವಿರೋಧ ಮಾಡುತ್ತಿದ್ದಾರೆ” ಎಂದರು.
”ಪ್ರತಾಪ್ ಸಿಂಹನಿಗೂ ಮೈಸೂರಿಗೂ ಏನು ಸಂಬಂಧ ನಮ್ಮ ಪಕ್ಷ 2014 ರಲ್ಲಿ ಅವರಿಗೆ ಟಿಕೆಟ್ ನೀಡಿತ್ತು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲಿ ಎಂದು ಪ್ರತಾಪ್ ಸಿಂಹ್ನನ್ನು ಗೆಲ್ಲಿಸಿದರು. ಗೆದ್ದ ನಂತರ ಈತ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚಾಮುಂಡಿ ಬೆಟ್ಟವನ್ನು ಈತ ಗುತ್ತಿಗೆ ಪಡೆದಿಲ್ಲ, ಇಲ್ಲಿಗೆ ಎಲ್ಲಾಧರ್ಮದವರು ಹೋಗುತ್ತಾರೆ” ಎಂದು ಹರಿಹಾಯ್ದರು.
ನಮಗೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಬೇಕು. ಹಾಗಾಗಿ ಇಂತಹ ತಲೆಹರಟೆ ಸಂಸದನನ್ನು ಪಕ್ಷದಿಂದ ದೂರ ಇಡಬೇಕು ಎಂದು ಅವರು ಆಗ್ರಹಿಸಿದರು.
”ಮಹಿಷ ಕೆಟ್ಟ ವ್ಯಕ್ತಿಯಾಗಿದ್ದರೆ ಮೈಸೂರಿನ ಮಹರಾಜರು ಏಕೆ ಮಹಿಷನ ಅಷ್ಟು ದೊಡ್ಡ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದರು? ಅಂತಹ ಪ್ರತಿಮೆಯನ್ನೇ ಅಪದ್ಧ, ಅಸಹ್ಯ ಎಂದು ಹೇಳುವ ಮೂಲಕ ಮೈಸೂರು ಮಹರಾಜರಿಗೆ ಅವಮಾನ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
”ನಾವುಗಳು ಸಣ್ಣವರಿದ್ದಾಗ ನಮ್ಮ ತಂದೆ ತಾಯಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಮಹಿಷನ ಮುಂದೆ ನಿಲ್ಲಿಸಿ ಪೂಜೆ ಮಾಡಿ ಮಹಿಷನ ಕಾಲಿನ ಕೆಳಗಡೆ ನುಗ್ಗಿಸುತ್ತಿದ್ದರು. ಯಾಕೆಂದರೆ ನನ್ನ ಮಗ ಮಹಿಷನ ರೀತಿ ಇರಲಿ ಎಂದು. ಇದೇ ಮಹಿಷನ ಪ್ರತಿಮೆ ಮುಂಭಾಗ ದಲಿತ ಹೋರಾಟಗಾರ ಮಂಟೇಲಿಂಗಯ್ಯ ಅಮವಾಸ್ಯೆ ದಿನವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಮಹಿಷ ದಸರಾ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಇಂತಹದರಲ್ಲಿ ಮಹಿಷ ಹೇಗೆ ಕೆಟ್ಟವನಾಗುತ್ತಾನೆ?” ಎಂದು ಪ್ರಶ್ನಿಸಿದರು.
”ಮಹಿಷ ದಸರಾಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ. ಪ್ರತಾಪ್ ಸಿಂಹ ಐದು ಸಾವಿರ ಜನ ಸೇರುತ್ತಾರೆ ಎಂದಾಕ್ಷಣ ಬಿಜೆಪಿ ಪಕ್ಷದ ಕಾರ್ಯಕರ್ತರು ಯಾರೂ ಬರುವುದಿಲ್ಲ. ಕೂಡಲೇ ಜಿಲ್ಲಾಡಳಿತ ಮಹಿಷ ದಸರಾಗೆ ಅನುಮತಿ ನೀಡಬೇಕು” ಎಂದು ಒತ್ತಾಯಿಸಿದರು.