ದಿಲೀಪ್ ಬಿಲ್ಡ್ ಕಾನ್ ಕಂಪನಿಯವರು ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಗಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ರಸ್ತೆಗಳನ್ನು ಹಾಳು ಮಾಡಿದ್ದು,ಇದನ್ನು ವಾರದೊಳಗೆ ಸರಿಪಡಿಸುವ ಕೆಲಸಕ್ಕೆ ಮುಂದಾಗದಿದ್ದರೆ ಜನರೊಂದಿಗೆ ಬಂದು ಹೆದ್ದಾರಿ ಕಾಮಗಾರಿ ನಿಲ್ಲಿಸುತ್ತೇನೆ ಎಂದು ಶಾಸಕ ಪುಟ್ಟರಾಜು ಎಚ್ಚರಿಕೆ ನೀಡಿದರು.
ಮಂಡ್ಯ ನಗರದ ಹೊರವಲಯದ ವಿ.ಸಿ.ಫಾರಂ ಗೇಟ್ ಬಳಿ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಬರಮಾಡಿಕೊಂಡು ರಸ್ತೆ ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನ ಕ್ಷೇತ್ರದ ಹಾಳಾಗಿರುವ ರಸ್ತೆಗಳ ಕಾಮಗಾರಿ ಮಾಡದಿದ್ದರೆ ಪ್ರತಾಪ ಸಿಂಹ ಅವರ ಮನೆ ಮುಂದೆ ಧರಣಿ ಮಾಡುವುದಾಗಿ ಗಂಭೀರವಾಗಿ ಹೇಳಿದ್ದೆ.ಅದರಂತೆ ನನ್ನ ಮಾತಿಗೆ ಸ್ಪಂದಿಸಿ ಪ್ರತಾಪಸಿಂಹ ಅವರು ಇಂದು ಅಧಿಕಾರಿಗಳ ಜೊತೆ ರಸ್ತೆಗಳ ಪರಿಶೀಲನೆ ನಡೆಸಿದ್ದಾರೆ.ಮೈಸೂರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬಂದಾಗ ಸಾಧ್ಯವಾದರೆ ನನ್ನನ್ನು ಕರೆಸಿ ಮಾತನಾಡುವುದಾಗಿ ಹೇಳಿದ್ದಾರೆ.ಅಲ್ಲದೆ ರಸ್ತೆ ಕಾಮಗಾರಿಗೆ ಹಣ ಬಿಡುಗಡ ಮಾಡುವ ಭರವಸೆ ನೀಡಿದ್ದಾರೆ.ನಾನು ಒಂದು ವಾರ ಕಾದು ನೋಡ್ತೇನೆ.ತಕ್ಷಣ ಸ್ಪಂದಿಸದಿದ್ದರೆ ನಾನೇ ಜನರೊಂದಿಗೆ ಹೆದ್ದಾರಿ ಕಾಮಗಾರಿ ನಿಲ್ಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಚುರುಕಾಗಿ ಸಂಸದ ಪ್ರತಾಪ್ ಸಿಂಹ ಕೆಲಸ ಮಾಡ್ತಿದ್ದಾರೆ.ಸಮಸ್ಯೆಗಳು ಏನೇ ಬಂದರೂ ಸ್ಪಂದಿಸುವ ಕೆಲಸ ಮಾಡಿದ್ದಾರೆ.ಆ ಕಾರಣದಿಂದ ಪ್ರತಾಪ್ ಸಿಂಹ ಮನೆ ಮುಂದೆ ಧರಣಿ ಕುಳಿತುಕೊಳ್ತೇನೆ ಅಂತ ಹೇಳಿದೆ.ಅವರು ಸ್ಪಂದಿಸುವ ಕೆಲಸ ಮಾಡ್ತಿದ್ದಾರೆ, ಕಾದು ನೋಡೋಣ.ಮಾಡದಿದ್ದರೆ ಕೆಲಸ ನಿಲ್ಲಿಸುತ್ತೇನೆ ಎಂದರು.