ಕೃಷಿ ಕೂಲಿಕಾರರಿಗೆ ಸಮಗ್ರ ಕಾಯ್ದೆ ಮತ್ತು ಕಲ್ಯಾಣ ಮಂಡಳಿಯನ್ನು ಜಾರಿಗೆ ತರಬೇಕೆಂದು ಕರ್ನಾಟಕ ಪ್ರಾಂತಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಒತ್ತಾಯಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಕೂಲಿ ಹೆಚ್ಚಳಕ್ಕಾಗಿ ಹಮ್ಮಿಕೊಂಡಿದ್ದ ಕೂಲಿಕಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಸರ್ಕಾರ 3 ವರ್ಷಗಳ ಹಿಂದೆ ಕೃಷಿ ಕೂಲಿಕಾರರಿಗೆ ಕನಿಷ್ಟ ಕೂಲಿ 424 ರೂಗಳನ್ನ ಘೋಷಣೆ ಮಾಡಿತ್ತು, ಆದರೆ ಇದುವರೆವಿಗೂ ಜಾರಿಗೆ ಬಂದಿಲ್ಲ. ಕೂಡಲೇ ಅದನ್ನು ಜಾರಿಗೊಳಿಸುವಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ಜೊತೆಗೆ ಉದ್ಯೋಗ ಖಾತರಿ ಕಾಯ್ದೆಯಡಿ ಕೂಲಿಕಾರರಿಗೆ 600 ರೂಗಳನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
57 ವರ್ಷ ತುಂಬಿ ಕೃಷಿ ಕೂಲಿಕಾರರನಿಗೆ 5 ಸಾವಿರ ಪಿಂಚಣಿ ಸೌಲಭ್ಯ ನೀಡಬೇಕು. ಮಹಿಳೆಯರಿಗೆ ಪುರುಷರಷ್ಟೇ ಸಮಾನ ವೇತನ ನೀಡಬೇಕು. ಅಪಘಾತ, ಅಕಾಲಿಕ ಮರಣ ಮುಂದಾದ ಸಂದರ್ಭದಲ್ಲಿ ಸಾವನ್ನಪ್ಪಿದವರಿಗೆ ಹಾಗೂ ಗಾಯಗೊಂಡವರಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಮಹಿಳಾ ಕೃಷಿಕೂಲಿಕಾರರಿಗೆ ಹೆರಿಗೆ ಭತ್ಯೆ ಹಾಗೂ ಹೆರಿಗೆ ರಜೆ ನೀಡಬೇಕು. ಕೃಷಿಕೂಲಿಕಾರರಿಗೆ ಸಂಬಳ ಸಹಿತದ ವಾರದ ರಜೆಯನ್ನು ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 200 ದಿನಗಳ ಕೆಲಸ ಕಡ್ಡಾಯಗೊಳಿಸಬೇಕು. ವಾಸಕ್ಕೆ ಸ್ವಂತ ಮನೆ ಇಲ್ಲದ ಕೂಲಿಕಾರರಿಗೆ ಮನೆಗಳನ್ನು ಒದಗಿಸಬೇಕು. ಇಡೀ ಜಿಲ್ಲೆಯನ್ನು ಬರಗಾಲಕ್ಕೆ ಒಳಪಡಿಸಬೇಕು. ರೈತರ ಫಸಲಿಗೆ ಕೂಡಲೇ ಪರಿಹಾರ ನೀಡಬೇಕು. ತಾಲ್ಲೂಕು ವಾರು ಪಶುಗಳಿಗೆ ಮೇವು ಕೇಂದ್ರವನ್ನು ತೆರದು ಪಶುಸಂರಕ್ಷಣೆಗೆ ಮುಂದಾಗಬೇಕು. ಕುಡಿಯುವ ನೀರಿನ ಬವಣೆಯನ್ನು ಪರಿಹರಿಸಬೇಕೆಂದರು.
ಸಂಘದ ರಾಜ್ಯ ಸಹ ಕಾರ್ಯದರ್ಶಿ ಕೆ.ಹನುಮೇಗೌಡ ಮಾತನಾಡಿ, ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಕೂಡಲೇ ಇತ್ಯರ್ಥ ಪಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಕೃಷಿಕೂಲಿಕಾರರು ಎಲ್ಲರೂ ಒಗಟ್ಟಿನಿಂದ ಇದ್ದಾಗ ಸಕರ್ಾರದಿಂದ ಹೋರಾಟ ನಡೆಸಿದಿ ಎಲ್ಲರಿಗೂ ನ್ಯಾಯ ದೊರಕಿಸಬಹುದೆಂದರು.
ಮಳವಳ್ಳಿ ಕೃಷಿಕೂಲಿಕಾರರ ಸಂಘದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು.
ಇದೇ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ, ಕೆ.ಬವಸರಾಜು, ಸರೋಜಮ್ಮ, ಶುಭಾವತಿ, ಟಿ.ಪಿ.ಅರುಣ್ಕುಮಾರ್, ಅಮಾಸಯ್ಯ, ರಾಜು, ಟಿ.ಸಿ.ವಸಂತ, ಟಿ.ಎಚ್.ಆನಂದ್, ಕುಂತೂರು ಲಕ್ಷ್ಮಿ, ಹುಸ್ಕೂರು ನಾಗರತ್ನ, ರಾಮಯ್ಯ, ಕಪೀನಿಗೌಡ, ಬಿ.ಎ.ಮಧುಕುಮಾರ್, ಎಂ.ಶಿವಕುಮಾರ್, ಆತಗೂರು ಶಿವರಾಜು ಸೇರಿದಂತೆ ಹಲವರಿದ್ದರು.