ಮಂಡ್ಯ ಜಿಲ್ಲೆಯಲ್ಲಿ ಅನುದಾನದ ಕೊರತೆಯಿಂದ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ, ಅನೇಕ ಬಾರಿ ಸಭೆಗಳನ್ನು ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ 5.65 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಇಂದು ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈಗಾಗಲೇ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಕಿ ಉಳಿದಿರುವ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಅವರ ಆದೇಶದ ಮೇರೆಗೆ ಉಳಿದಿರುವ ಸಿವಿಲ್ ಕಾಮಗಾರಿಯನ್ನು ಪೂರ್ಣಗೊಳಿಸಲು ಇಂದು ಅಧಿಕಾರಿಗಳ ಜೊತೆ ಚರ್ಚಿಸಿ. ಇನ್ನು 2-3 ದಿನಗಳಲ್ಲಿ ಸಿವಿಲ್ ಕಾಮಗಾರಿ ಪ್ರಾರಂಭ ಮಾಡಲು ಸೂಚಿಸಿದರು.
ಕ್ಯಾನ್ಸರ್ ಕೇರ್ ಕೇಂದ್ರಕ್ಕೆ ಸಂಬಂಧಪಟ್ಟ ಉಪಕರಣಗಳ ಖರೀದಿಗೆ ಟೆಂಡರ್ ಕರೆಯುವುದು ಮತ್ತು ಸಿಬ್ಬಂದಿ ನೇಮಕಾತಿ, ಗ್ರಂಥಾಲಯ, ಪರೀಕ್ಷಾ ಕೊಠಡಿ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದರು.
ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಹಾಗೂ ಅವರನ್ನು ಆರೈಕೆ ಮಾಡಲು ಬರುವವರಿಗೆ ಶೌಚಾಲಯ ಹಾಗೂ ಸ್ನಾನದ ಗೃಹದ ಕೊರತೆಯ ಬಗ್ಗೆ ತಿಳಿಸಿದ್ದು, ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಾಣ ಮಾಡಲು ಸಭೆ ನಡೆಸಿ ಜಾಗ ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರೋಗಿಗಳ ಜೊತೆ ಬರುವ ಸಹಾಯಕರಿಗೆ ವಿಶ್ರಾಂತಿ ತಾಣ ನಿರ್ಮಿಸಲು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕೈಗಾರಿಕೆ ಸಂಸ್ಥೆಗಳು CSR ಅನುದಾನದ ಮೂಲಕ ಅಥವಾ ದಾನಿಗಳ ಮೂಲಕ ವಿಶ್ರಾಂತಿ ಗೃಹ, ತಾಣ ನಿರ್ಮಾಣ ಮಾಡಲು ಚಿಂತಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಮಿಮ್ಸ್ ಆಸ್ಪತ್ರೆಯ ಡೈರೆಕ್ಟರ್ ಡಾ. ಬಿ.ಜೆ ಮಹೇಂದ್ರ, ಡಿಹೆಚ್ಓ ಡಾ. ಕೆ.ಮೋಹನ್, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಶ್ರೀಧರ್, ಮಿಮ್ಸ್ ಆಡಳಿತ ಅಧಿಕಾರಿ ಡಾ.ಜಾನ್ಸನ್, ಆರೋಗ್ಯ ಇಲಾಖೆಯ ಡಾ. ಸೋಮಶೇಖರ್ ಹಾಗೂ ಬೆಟ್ಟಸ್ವಾಮಿ, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.