42 ನೇ ರಾಷ್ಟ್ರೀಯ ಮಟ್ಟದ ಶೂಟಿಂಗ್ ಬಾಲ್ ಪಂದ್ಯಾವಳಿ ಅಕ್ಟೋಬರ್ 6 ರಿಂದ 8ರವರೆಗೆ ರಾಜಸ್ಥಾನದ ಜೈಪುರದಲ್ಲಿ ನಡೆಯಲಿದ್ದು,ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ಎಸ್.ಬಿ.ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಹಾಗೂ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ಅವರು ಮಂಡ್ಯದ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಅಭಿನಂದಿಸಿ ಬೀಳ್ಕೊಟ್ಟರು.
ಜೂನಿಯರ್ ಬಾಯ್ಸ್ ಮತ್ತು ಗರ್ಲ್ಸ್ ಈ ಒಂದು ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಬಾಲಕರ ವಿಭಾಗದಿಂದ 12 ಕ್ರೀಡಾಪಟುಗಳು, ಬಾಲಕಿರ ವಿಭಾಗದಿಂದ 12 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಮಾಂಡವ್ಯ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಿಂದ 11 ಬಾಲಕರು ಮತ್ತು 7 ಬಾಲಕಿಯರು,ಮಾಂಡವ್ಯ ಪದವಿಪೂರ್ವ ಕಾಲೇಜಿನಿಂದ ಒಂದು ಬಾಲಕ ಮತ್ತು 2 ಬಾಲಕಿಯರು, ವಿದ್ಯಾ ಗಣಪತಿ ಪ್ರೌಢಶಾಲೆಯಿಂದ 2 ಬಾಲಕಿಯರು, ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನಿಂದ 1 ಬಾಲಕಿ ಆಯ್ಕೆಯಾಗಿದ್ದಾರೆ.
ಈ ಪಂದ್ಯಾವಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದ ಎಸ್.ಬಿ.ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಜೈಪುರದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಶೂಟಿಂಗ್ ಬಾಲ್ ಪಂದ್ಯಾವಳಿಗೆ ಕರ್ನಾಟಕದಿಂದ 24 ಮಂದಿ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳು ರಾಷ್ಟ್ರಮಟ್ಟದ ಪದಕವನ್ನು ಮಂಡ್ಯ ಜಿಲ್ಲೆಗೆ ತರಬೇಕು. ಮಂಡ್ಯ ಜಿಲ್ಲೆಗೆ ಕೀರ್ತಿ ಬರುವುದರಿಂದ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿಗೆ ಕೀರ್ತಿ ಬರುತ್ತದೆ ಹಾಗೂ ತಂದೆ ತಾಯಿಗಳಿಗೂ ಕೀರ್ತಿ ಬರುತ್ತದೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್.ಬಿ. ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಶೈಕ್ಷಣಿಕ ಪಾಲುಗಾರರಾದ ಚೇತನ್ ಕೃಷ್ಣ, ಎಚ್.ಎಮ್.ಶ್ರೀನಿವಾಸ್, ಎಂ.ಆರ್. ಮಂಜು, ತರಬೇತುದಾರ ಪ್ರಕಾಶ್, ದೈಹಿಕ ಶಿಕ್ಷಣದ ಉಪನ್ಯಾಸಕರಾದ ಉಮೇಶ್ ಎಂ.ಎಸ್, ಎಂ.ಸಚಿನ್ ಹಾಜರಿದ್ದರು.