ಮದ್ದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕದಲೂರು ಉದಯ್ ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಸೋಮವಾರ ಸಂಜೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮದ್ದೂರು ಕ್ಷೇತ್ರಕ್ಕೆ ಉತ್ತಮ ಇತಿಹಾಸವಿದೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಇಲ್ಲಿಂದಲೇ ಗೆದ್ದು ಸಿಎಂ ಆಗಿದ್ದರು. ಶಿವಪುರ ಸತ್ಯಾಗ್ರಹ ಸೌಧವು ಕೂಡ ಸ್ವಾತಂತ್ರ ಹೋರಾಟದಲ್ಲಿ ದೊಡ್ಡ ಹೆಗ್ಗುರುತಾಗಿದೆ. ಇಂತಹ ಭವ್ಯ ಇತಿಹಾಸವಿರುವ ಕ್ಷೇತ್ರದಲ್ಲಿ ಸ್ವಂತ ಶಕ್ತಿಯ ಮೇಲೆ ಕ್ಷೇತ್ರದಲ್ಲಿ ಸಂಘಟನೆ ಮಾಡಿರುವ ಯುವ ಮುಖಂಡ ಉದಯ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಹೆಚ್ಚಿನ ಶಕ್ತಿ ತಂದು ಕೊಡಲಿದೆ ಎಂದರು.
ಯಾವುದೇ ಷರತ್ತಿಲ್ಲದೇ ಪಕ್ಷ ಸೇರ್ಪಡೆ
ಯಾವುದೇ ಷರತ್ತಿಲ್ಲದೇ ಉದಯ್ ಅವರು ಕಾಂಗ್ರೆಸ್ ಸೇರಿದ್ದಾರೆ. ಯಾರಿಗೆ ಪಕ್ಷದ ಟಿಕೆಟ್ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಪಕ್ಷದ ವರಿಷ್ಠರು ಕೂತು ಮಾತನಾಡಿ ಯಾರಿಗೆ ಗೆಲ್ಲುವ ಅವಕಾಶಗಳಿವೆ. ಅಂತಹವರಿಗೆ ಟಿಕೆಟ್ ನೀಡಲಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಲ್ಲಿ ದುಡಿದು ಜೆಡಿಎಸ್ ಪಕ್ಷದ ತಮ್ಮಣ್ಣ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದ ಎಂದರು.
ಶಾಸಕರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಮಾಜಿ ಶಾಸಕ ಬಿ.ರಾಮಕೃಷ್ಣ, ಮುಖಂಡ ಗುರುಚರಣ್ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮತಿ ಪಡೆದೇ ಉದಯ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಮಣಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಕ್ಕೆ ಎಲ್ಲಾ ಮುಖಂಡರು ಒಗ್ಗೂಡಿ ಹೋರಾಟ ನಡೆಸಬೇಕೆಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಕಟ್ಟೋಣ
ನನ್ನೆಲ್ಲ ಹಿತೈಷಿಗಳು, ಯುವ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಈ ದಿನ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಸೇರಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಕಟ್ಟೋಣ ಎಂದು ಯುವ ನಾಯಕ ಕದಲೂರು ಉದಯ್ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಶಾಸಕರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಮಾಜಿ ಶಾಸಕ ಬಿ.ರಾಮಕೃಷ್ಣ, ಮುಖಂಡ ಗುರುಚರಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.