ಮಂಡ್ಯ ತಾಲೂಕಿನ ಕೆರಗೋಡು ಹೋಬಳಿಯ ವಿವಿಧ ಗ್ರಾಮದಲ್ಲಿ 45 ಲಕ್ಷ ರೂ.ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕ ಎಂ.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು.
ಕೆ.ಆರ್.ಐ.ಡಿ.ಎಲ್. ಇಲಾಖೆಯ ಯೋಜನೆಯಡಿ ಮಾರಗೌಡನಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಭಾಗಗಳ ರಸ್ತೆ ಮತ್ತು ಚರಂಡಿ ಅಭಿವೃದ್ದಿ, ಶಿವಾರ ಗ್ರಾಮದಲ್ಲಿ 15 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿದೆ. ಇಂದಿನಿಂದ ಕಾಮಗಾರಿಗಳು ಆರಂಭಗೊಂಡಿವೆ ಎಂದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ಇಲಾಖೆಗಳ ಅನುದಾನದಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು. ಕುಡಿಯುವ ನೀರು, ಸಮರ್ಪಕ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಜನೋಪಯೋಗಿ ಕಲ್ಯಾಣ ಕಾರ್ಯಗಳು ಸಾಗಲಿವೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಾದರೆ ನಾನು ತ್ಯಾಗಮಾಡಲು ಸಿದ್ಧ.ಅವರಿಗೆ ಅಭೂತ ಪೂರ್ವ ಗೆಲುವು ನೀಡಿ, ಮುಖ್ಯಮಂತ್ರಿಯನ್ನಾಗಿ ಮಾಡಿ, ಜಿಲ್ಲೆಯ ಅಭಿವೃದ್ದಿಗೆ ಹೊಸ ಐತಿಹ್ಯ ಬರೆಯುವೆ ಎಂದರು.
ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಹೊಸ ಕಾರ್ಖಾನೆ ನಿರ್ಮಿಸುವ ಕನಸು ನಮ್ಮ ನಾಯಕರಾದ ಕುಮಾರಸ್ವಾಮಿ ಅವರದ್ದಾಗಿದೆ. ಮುಖ್ಯಮಂತ್ರಿಯಾಗುವ ಅವಕಾಶ ನಮ್ಮ ಜಿಲ್ಲೆಯವರದ್ದಾಗುತ್ತದೆ, ಮತ್ತಷ್ಟು ಅಭಿವೃದ್ದಿ ಜಿಲ್ಲೆಯಾಗಿ ರೂಪುಗೊಳ್ಳುವ ದಿನಗಳು ಸೃಷ್ಠಿಯಾಗಲಿ ಎಂದರು.
ನರೇಗಾ ಕಾರ್ಮಿಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಎರಡು ತಿಂಗಳ ಸಂಬಳ ಬಿಡುಗಡೆಯಾಗಿಲ್ಲ ಎಂದು ದೂರಿದ ತಕ್ಷಣ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಂಬಳ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾರಗೌಡನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ವಸಂತಕುಮಾರ್, ನಾಗಲಿಂಗೇಗೌಡ, ಶಿವಾರ ಗ್ರಾಮದ ನಾಗರಾಜು, ಗೌರಮ್ಮ, ಯೋಗೇಶ್ ಮತ್ತಿತರರಿದ್ದರು.
ನೂತನ ಪಶು ಚಿಕಿತ್ಸಾ ಕೇಂದ್ರ ಉದ್ಘಾಟಿಸಿದ ಶಾಸಕ ಎಂ.ಶ್ರೀನಿವಾಸ್
ಮಂಡ್ಯ ತಾಲ್ಲೂಕಿನ ಹೊಡಾಘಟ್ಟ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಪಶುವೈದ್ಯಕೀಯ ಸೇವಾ ಇಲಾಖೆ, ಆರ್.ಐ.ಡಿ.ಎಫ್.ಯೋಜನೆಯಡಿ ನಿರ್ಮಿಸಿರುವ ಪಶುಚಿಕಿತ್ಸಾ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಎಂ.ಶ್ರೀನಿವಾಸ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನೆನೆಗುದಿಗೆ ಬಿದ್ದಿದ್ದ ಕಟ್ಟಡದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗಿದೆ. ನನ್ನ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಆಗಿದ್ದು, ಸಂತೋಷ ತಂದಿದೆ.ಪಶು ಆಸ್ಪತ್ರೆಗೆ ಮೂಲ ಸೌಕರ್ಯ ಸೇರಿದಂತೆ ಬೇಕಿದ್ದ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರಿಗೆ ಹೈನುಗಾರಿಕೆ ಎಂಬುದು ಮುಖ್ಯ ಕಸುಬಾಗಿದೆ. ಹಲವರು ಜಾನುವಾರುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಅವರಿಗೆ ಸಹಕಾರ ಆಗುವಂತೆ ಅಭಿವೃದ್ಧಿಯಲ್ಲಿ ಸಹಕರಿಸಿದ್ದೇನೆ, ಮುಂದೆಯೂ ಸಹ ರೈತರ ಪರವಾಗಿ ಇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಡಿ.ರಮೇಶ್ರಾಜು, ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಸಿ.ಚೇತನ್, ಡಾ.ಯೋಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಮಾ, ಸದಸ್ಯರಾದ ಗಣೇಶ್, ಸಿದ್ದರಾಮು, ಸಿದ್ದರಾಜು, ಆನಂದ್, ಅಭಿಷೇಕ್, ಗೌರಮ್ಮ, ಚೈತ್ರಾವತಿ, ಸೋಮಶೇಖರ್, ಪಿಡಿಒ ಕೋಮಲಾ ಸೇರಿದಂತೆ ಇತರರು ಭಾಗವಹಿಸಿದ್ದರು.