ಬಾಲಕಿಯೊಬ್ಬಳಿಗೆ ತನ್ನ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣದಲ್ಲಿ ಆರೋಪಿಗೆ ಪೊಲೀಸರು ಠಾಣೆಯಲ್ಲಿಯೇ ಜಾಮೀನು ನೀಡಿರುವುದನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಖಂಡಿಸಿದ್ದಾರೆ.
ಕೆ.ಆರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಂಗಳ್ಳಿ ನಿವಾಸಿ ಕುರಿಗಾಹಿಯೊಬ್ಬ ಪ್ರತಿದಿನ ಮನೆಯ ಮುಂಭಾಗ ಕುಳಿತಿದ್ದ ಬಾಲಕಿಗೆ ತನ್ನ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕಿ ತನ್ನ ತಾಯಿಗೆ ತಿಳಿಸಿದಾಗ, ಆತನ ವರ್ತನೆಯನ್ನು ವಿಡಿಯೋ ಸಮೇತ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಆತನಿಗೆ ಠಾಣೆಯಲ್ಲಿ ಜಾಮೀನು ನೀಡಿ ಕಳುಹಿಸಿದ್ದರು.
ಇದನ್ನೂ ಓದಿ: ಅನುಮಾನಕ್ಕೆ ಆಸ್ಪದವಾದ ಕೆಆರ್ಎಸ್ ಠಾಣೆ ಪೊಲೀಸರ ನಡೆ
ಈ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಅವರಿಗೆ ಕರೆ ಮಾಡಿ, ಮಳವಳ್ಳಿಯಲ್ಲಿ ಆದ ಅನಾಹುತ ನಮ್ಮ ತಾಲೂಕಿನಲ್ಲಿ ಆಗುವುದು ಬೇಡ. ಆರೋಪಿಗೆ ಠಾಣೆಯಲ್ಲಿ ಜಾಮೀನು ನೀಡಿರುವುದರಿಂದ ಸಮಾಜದಲ್ಲಿ ಭಯ ಬರದೆ, ಮಂದೆಯೂ ಇಂತಹ ಘಟನೆಗಳು ನಡೆಯುವಂತಾಗುತ್ತದೆ. ಆದ್ದರಿಂದ ಆತನಿಗೆ ಗರಿಷ್ಠ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಈ ಹಿಂದೆ ಹಳ್ಳಿಗಾಡಿನಲ್ಲಿ ಇಂತಹ ಪ್ರಕರಣಗಳು ಗೌಪ್ಯವಾಗಿ ಮುಚ್ಚಿ ಹೋಗುತ್ತಿತ್ತು. ಈಗ ನಾಗರಿಕತೆ ಬೆಳೆಯುತ್ತಿದ್ದಂತೆ ಹೆಣ್ಣು ಮಕ್ಕಳು ಜಾಗೃತರಾಗಿ ಇಂತಹ ಪ್ರಕರಣಗಳನ್ನು ಖಂಡಿಸುತ್ತಿದ್ದಾರೆ. ನಾನು ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಎಸ್ಪಿ ಅವರು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿದರು.