ಎಸ್ ಸಿ, ಎಸ್ ಟಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಪರಿಶಿಷ್ಠರಿಗೆ ಮೀಸಲಿರಿಸಿದ 34.22149 ಕೋಟಿ ಅನುದಾನದಲ್ಲಿ ₹11,000 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲು ತೀರ್ಮಾನಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಿವಿ ಮೇಲೆ ಹೂವಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಜೆಸಿ ವೃತ್ತದಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆ ಕಾಯ್ದೆ2013 ರ ಕಲಂ 7(ಡಿ) ತಿದ್ದುಪಡಿ ಮಾಡುವುದಾಗಿ ಅಧಿವೇಶನದಲ್ಲಿ ಮಂಡಿಸಿ, ತಿದ್ದುಪಡಿ ಮಾಡಲಿಲ್ಲ ಅಥವಾ ಸುಗ್ರೀವಾಜ್ಞೆ ಹೊರಡಿಸಲಿಲ್ಲ, ಆದರೆ ಎಸ್ಸಿ, ಎಸ್ಟಿ ಅನುದಾನವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಿ ದಲಿತರನ್ನು ವಂಚಿಸುತ್ತಿದೆ ಎಂದು ದೂರಿದರು.
ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹಣ ವರ್ಗಾವಣೆಗೆ ನಿರಾಕರಿಸದೆ ಮೌನವಹಿಸಿರುವುದು ದಲಿತ ಸಮುದಾಯಕ್ಕೆ ನೋವುಂಟು ಮಾಡಿದೆ. ವಿಧಾನ ಮಂಡಲದಲ್ಲಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳು ಈ ಅನ್ಯಾಯ ಖಂಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಜೆಟ್ ಭಾಷಣದಲ್ಲಿ ನುಡಿದಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಉಪ ಯುವಜನ ಕಾಯ್ದೆ 2013ರ ಕಲಂ7(ಡಿ) ತಿದ್ದುಪಡಿ ಮಾಡಬೇಕು, ಪರಿಶಿಷ್ಟರಿಗೆ ಮೀಸಲಾಗಿದ್ದ 11 ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ತೀರ್ಮಾನವನ್ನು ಹಿಂಪಡೆಯಬೇಕು. ಉಪ ಯೋಜನಾ ಕಾಯ್ದೆ ದುರುಪಯೋಗ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಸರ್ಕಾರ ಪರಿಶಿಷ್ಟರ ಅನುದಾನ ಖೋತಾ ಮಾಡಿರುವ ವಿವರದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ವಿಭಾಗೀಯ ಅಧ್ಯಕ್ಷ ಕೆ.ಎಂ.ಅನಿಲ್ ಕುಮಾರ್ ಕೆರಗೋಡು, ಕೆ.ಎಂ. ಶ್ರೀನಿವಾಸ್, ಎಸ್.ಕುಮಾರ್, ಶಿವರಾಜ್ ಆತಗೂರು,ವೈ, ಸುರೇಶ್ ಕುಮಾರ್ ಶೆಟ್ಟಿಹಳ್ಳಿ, ರಾಮಕೃಷ್ಣ ಸಂಪಹಳ್ಳಿ, ಹರಿಕುಮಾರ್.ಸೋಮಶೇಖರ್ ಮೇನಾಗರ,ಬಿ.ಎಂ ಸೋಮಶೇಖರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.