ಕನ್ನಡದ ಖ್ಯಾತ ಚಿತ್ರನಟ ಕಿಶೋರ್ ಕುಮಾರ್ ಅವರು ಮತ್ತೆ ಪ್ರಧಾನಿ ಮೋದಿ ಹಾಗೂ ವ್ಯವಸ್ಥೆ ವಿರುದ್ಧ ಗುಡುಗಿದ್ದಾರೆ. ಈ ವಿಕೃತ ವಿಶ್ವಗುರುವನ್ನು ಹೊಡೆದೋಡಿಸಿ, ಪ್ರೀತಿಯ ಶಾಂತಿಯ ನಮ್ಮ ಭಾರತಕ್ಕೆ ಮರಳಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಗಳು, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯಗಳು ಹಾಗೂ ಈ ಆಡಳಿತ ವ್ಯವಸ್ಥೆ ವಿರುದ್ಧ ಮೇಲಿಂದ ಮೇಲೆ ಪ್ರತಿಕ್ರಿಯಿಸುವ ಕನ್ನಡದ ಸಂವೇದನಾಶೀಲ ನಟ ಕಿಶೋರ್ ಕುಮಾರ್ ಅವರು ಇದೀಗ ಮತ್ತೆ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸಿ ವಿಶ್ವಗುರು ಎಂದು ಕರೆಯಿಸಿಕೊಳ್ಳುವ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.
View this post on Instagram
“>
ಇನ್ಸ್ಟಾಗ್ರಾಮ್ನಲ್ಲಿ ಕಿಶೋರ್ ಪೋಸ್ಟ್ ಹಾಕಿದ್ದು, ”ದೇಶದಲ್ಲಿ ವಿಶ್ವಗುರುಗಳಿದ್ದಾರೆ ಎಚ್ಚರ .. ಮಣಿಪುರದಲ್ಲಿ, ಹರಿಯಾಣದಲ್ಲಿ, ಮುಂಬೈ ರೈಲಿನಲ್ಲಿ , ಟಿವಿ ಚಾನೆಲ್ಲುಗಳಲ್ಲಿ , ಪಾರ್ಲಿಮೆಂಟಿನಲ್ಲಿ , ಕಪಟ ಕ್ಯಾಪಿಟಲಿಸ್ಟುಗಳ ಡ್ರಾಯಿಂಗು ರೂಮಿನಲ್ಲಿ , ಕೋರ್ಟು ಕಚೇರಿಗಳಲ್ಲಿ , ಪೋಲೀಸು ವೇಷದಲ್ಲಿ , ಐಟಿ ಸೆಲ್ಲುಗಳಲ್ಲಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಯಲ್ಲಿ.. ದೇವರ ಹೆಸರಲ್ಲಿ, ಅಧಿಕಾರ ದಾಹದ ಹೊಲಸಲ್ಲಿ , ಮತಿಭ್ರಮಿತರಾದ ಮತಾಂಧ ವಿಶ್ವಗುರುಗಳಿದ್ದಾರೆ.. ಎಚ್ಚರ…” ಎಂದು ಬರೆದಿದ್ದಾರೆ.
”ಇವರಿಗೆ ಜೈ ಅನ್ನದಿದ್ದರೆ, ಇವರನ್ನು ಪ್ರಶ್ನಿಸಿದರೆ … ಯೋಚಿಸಿದರೂ ಸಹ … ಗುಂಡಿಕ್ಕುತ್ತಾರೆ, ಬಡಿದು ಕೊಲ್ಲುತ್ತಾರೆ, ಮನೆ ಮಠ ಸುಡುತ್ತಾರೆ, ಕೆಡವುತ್ತಾರೆ, ಮಕ್ಕಳನ್ನು ಕಡಿದು ಕೊಲ್ಲುತ್ತಾರೆ. ಬೆತ್ತಲೆ ಮೆರವಣಿಗೆ ಮಾಡಿಸಿ ಅತ್ಯಾಚಾರ ಮಾಡುತ್ತಾರೆ, ದೇಶದ ಕೀರ್ತಿ ವಿಶ್ವದಲ್ಲೆಲ್ಲ ಹರಡುತ್ತಾರೆ.. ಎಚ್ಚರ..” ಎಂದು ಹೇಳಿದ್ದಾರೆ.
”ಬನ್ನಿ ಒಂದಾಗುವ ನಮ್ಮ ನಮ್ಮಲ್ಲಿ ಹೊಡೆದಾಡುವುದನ್ನು ಬಿಟ್ಟು ನಾವೆಲ್ಲರೂ ಒಂದಾಗಿ ಹೊಡೆದೋಡಿಸಬೇಕಿದೆ. ಈ ವಿಕೃತ ವಿಶ್ವಗುರುಗಳನು.. ಮತ್ತೆ ಮರಳಬೇಕಿದೆ ಪ್ರೀತಿಯ ಶಾಂತಿಯ ನಮ್ಮ ಭಾರತಕೆ..” ಎಂದು ಕಿಶೋರ್ ಕುಮಾರ್ ಕರೆ ಕೊಟ್ಟಿದ್ದಾರೆ.