ತೆಲಂಗಾಣದ ವೇಮುಲವಾಡದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮೋದಿಯವರು ಕಳೆದ ಐದು ವರ್ಷಗಳಿಂದ
ಅದಾನಿ ಮತ್ತು ಅಂಬಾನಿ ಬಗ್ಗೆ ಟೀಕಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಶಹಜಾದ (ರಾಹುಲ್ ಗಾಂಧಿ) ಚುನಾವಣೆ ಘೋಷಣೆಯಾದ ನಂತರ ಮೌನ ತಾಳಿದ್ದಾರೆ. ರಾಹುಲ್ ಗಾಂಧಿಗೆ ಅದಾನಿ, ಅಂಬಾನಿ ಅವರು
ಟೆಂಪೋದಲ್ಲಿ ಕಪ್ಪು ಹಣವನ್ನು ತುಂಬಿ ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿದ್ದಾರೆ. ಅದಕ್ಕೆ ಅವರು ಮೌನವಾಗಿದ್ದಾರೆ ಎಂದು ಟೀಕಿಸಿದ್ದರು.
ದೇಶದ ಶೇ.90 ರಷ್ಟು ಮಾಧ್ಯಮ ಮತ್ತು ಟಿವಿಗಳ ಮಾಲೀಕತ್ವ ಹೊಂದಿರುವ ದೇಶದ ಎರಡು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಇದರ ಬಗ್ಗೆ ಗಾಢ ಮೌನ ವಹಿಸಿವೆ. ಏಕೆಂದರೆ ಈ ದೇಶದ ಬಹುತೇಕ ಮಾಧ್ಯಮಗಳು ಇರುವುದು ಭಾರತದ ಎರಡು ದೈತ್ಯ ಕಾರ್ಪೊರೇಟ್ ಸಂಸ್ಥೆಗಳಾದ ಗೌತಮ್ ಅದಾನಿ ಹಾಗೂ ಮುಕೇಶ್ ಅಂಬಾನಿ ಒಡೆತನದಲ್ಲಿ. ಮೋದಿಯವರು ಅದಾನಿ ಮತ್ತು ಅಂಬಾನಿಗಳಿಂದ ಟೆಂಪೋಗಳಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರೂ ಕೂಡ ಇವರಿಬ್ಬರ ಮಾಲೀಕತ್ವದ
ಟಿವಿ ಷೋಗಳಲ್ಲಿ, ಪ್ರೈಮ್ ಟೈಮ್ ಗಳಲ್ಲಿ ಮೋದಿಜೀ ಅವರ ಹೇಳಿಕೆ ಬಗ್ಗೆ ಯಾವುದೇ ಚರ್ಚೆ, ಸಂವಾದ ಕಾರ್ಯಕ್ರಮಗಳು ಪ್ರಸಾರವಾಗದೇ ಇರುವುದು ಚರ್ಚೆಯ ವಿಷಯವಾಗಿದೆ.
ಈ ಬಗ್ಗೆ ದೇಶದ ಜನರು ಅದಾನಿ ಮಾಲೀಕತ್ವದ ಎನ್.ಡಿ.ಟಿ.ವಿ, ಅಂಬಾನಿ ಮಾಲೀಕತ್ವದ ನ್ಯೂಸ್ 18, ಇಂಡಿಯಾ ಟುಡೆ ಎಎನ್ಐ ಮೊದಲಾದ ಮಾಧ್ಯಮಗಳಲ್ಲಿ ಮೋದಿ ಹೇಳಿದ ಟೆಂಪೋಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಬಗ್ಗೆ ಒಂದೇ ಒಂದು ಚರ್ಚೆಯೂ ನಡೆಯದಿರುವುದನ್ನು ನೋಡಿದರೆ ಅವರ ಮೋದಿ ಭಕ್ತಿ ಎಂತಹುದೆಂದು ಸಾಬೀತಾಗುತ್ತದೆ. ದೇಶದ ಪ್ರಧಾನಿಯೇ ಸಾರ್ವಜನಿಕವಾಗಿ ಹೇಳಿದರೂ ಅಂಬಾನಿ, ಅದಾನಿಯ ಕಪ್ಪುಹಣದ ಬಗ್ಗೆ ಚರ್ಚೆ ನಡೆಯದಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಮಾಧ್ಯಮಗಳ ಪತ್ರಿಕಾ ಧರ್ಮವನ್ನು ದೇಶದ ಜನರು ಪ್ರಶ್ನಿಸುವಂತಾಗಿದೆ.
ಸ್ನೇಹಿತರಿಗೆ ಕೈಕೊಟ್ಟ ಮೋದಿಜೀ
ದೇಶದ ಪ್ರಮುಖ ಕಾರ್ಪೊರೇಟ್ ಕುಳಗಳಾದ ಅದಾನಿ ಮತ್ತು ಅಂಬಾನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕಪ್ಪುಹಣ ನೀಡುವ ವ್ಯಕ್ತಿಗಳು ಎಂದು ಹೇಳುತ್ತಾ ಮೋದಿಜೀ ಅವರು ತಮ್ಮ ಪರಮಾಪ್ತ ಸ್ನೇಹಿತರಿಗೆ ಕೈಕೊಟ್ಟು ಅವರನ್ನು ವಿಶ್ವದಾದ್ಯಂತ ಬೆತ್ತಲೆ ಮಾಡಿದ್ದಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಗುಜರಾತಿನ ಅದಾನಿಗೆ ಈ ದೇಶದ ಕಲ್ಲಿದ್ದಲು ಗಣಿಗಳು, ವಿಮಾನ ನಿಲ್ದಾಣಗಳು, ಬಂದರುಗಳು, ದೊಡ್ಡ ಉದ್ಯಮಗಳನ್ನು ಸ್ಥಾಪಿಸಲು ನೆರವಾದ ಮೋದಿಯವರು ಈಗ ಅವರನ್ನು ದೂರುತ್ತಾ ಇರುವುದನ್ನು ನೋಡಿದಾಗ, ಈ ವ್ಯಕ್ತಿ ಅಧಿಕಾರಕ್ಕಾಗಿ ತನ್ನ ಜೊತೆ ಇದ್ದ ಸ್ನೇಹಿತರನ್ನೂ ಬೇಕಾದರೂ ಬಳಸುತ್ತಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಸಾರ್ವಜನಿಕರು ಮೋದಿ ಸರ್ಕಾರ ಎಂದರೆ ಅದಾನಿ ಮತ್ತು ಅಂಬಾನಿ ಸರ್ಕಾರ ಎಂದು ಭಾವಿಸಿದ್ದರು. ಈಗ ಜನರ ನಡುವಿರುವ ಸತ್ಯವನ್ನು ಸುಳ್ಳು ಮಾಡಲು ಮೋದಿಯವರು ಹೊರಟಿದ್ದಾರೆ. ಜನರ ಮನಸ್ಸಿನಲ್ಲಿದ್ದ ಮೋದಿ ಸರ್ಕಾರ ಎಂದರೆ ಅದಾನಿ, ಅಂಬಾನಿಯದ್ದು ಎನ್ನುವುದನ್ನು ಅಳಿಸಲು ಪ್ರಯತ್ನಿಸುತ್ತಿರುವ ಮೋದಿಯವರದ್ದು ವ್ಯರ್ಥ ಪ್ರಯತ್ನವಾಗಿದೆ.
ಅವರ ಸುಳ್ಳಿನ ಲೆಕ್ಕಕ್ಕೆ ಈ ಮತ್ತೊಂದು ಸುಳ್ಳಿನ ಹೇಳಿಕೆ ಜಮೆಯಾಗಿದೆ. ದೇಶದ ಜನರನ್ನು ಮೋದಿಯವರು ದಾರಿ ತಪ್ಪಿಸಲು ಹೊರಟು ತಾವೇ ದಾರಿ ತಪ್ಪಿದ್ದಾರೆ ಎಂದು ಜನರೇ ಮಾತನಾಡುತ್ತಿದ್ದಾರೆ.