ಸರ್ಕಾರದ ವತಿಯಿಂದ ನಡೆಸಲಾಗುವ ಆರೋಗ್ಯ ಮೇಳದ ಪ್ರಯೋಜನ ಪಡೆದು ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳುಬೇಕೆಂದು ಶಾಸಕ ಎಂ.ಶ್ರೀನಿವಾಸ್ ಸಲಹೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕಲ್ಲು ಕಟ್ಟಡದಲ್ಲಿ ನಡೆದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂತನವಾಗಿ ಮಂಡ್ಯ ಜಿಲ್ಲೆಯಲ್ಲಿ 4 ಆಸ್ಪತ್ರೆಗಳನ್ನು ನಿರ್ಮಾಣ ಮಾಡುವಂತೆ ಈಗಾಗಲೇ ಸ್ಥಳವನ್ನು ಗುರುತಿಸಿ, ಈ ವಿಷಯ ಕುರಿತು ಸದನದಲ್ಲೂ ಸಹ ಚರ್ಚಿಸಲಾಗಿದೆ.ಮತ್ತೆ ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಪ್ರಸ್ತಾಪಿಸುತ್ತೇನೆ ಎಂದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಜೆ. ದಿವ್ಯ ಪ್ರಭು ಮಾತನಾಡಿ,75ನೇ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಂಯೋಜನೆಯೊಂದಿಗೆ ಉಚಿತವಾಗಿ ಆರೋಗ್ಯ ಮೇಳ ಹಾಗೂ ಜಾಗೃತಿ ಶಿಬಿರವನ್ನು ಮಂಡ್ಯ ಜಿಲ್ಲೆಯಲ್ಲಿನ ವಿವಿಧ ತಾಲ್ಲೂಕಿನಲ್ಲಿ ಆಯೋಜಿಸಿದ್ದೇವೆ.ಮನುಷ್ಯನಿಗೆ ಆರೋಗ್ಯ ಇಲ್ಲದೆ ಬದುಕಲು ಅಸಾಧ್ಯ.
ದೇಹ ನಮ್ಮ ಜೀವನಕ್ಕೆ ಅಡಿಪಾಯ ಇದ್ದ ಹಾಗೆ. ಹಾಗಾಗಿ ದೇಹವನ್ನು ಬಹಳ ಜಾಗೃತಿಯಿಂದ ಆರೋಗ್ಯದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.ಜನತೆ ಆರೋಗ್ಯ ಮೇಳದ ಪ್ರಯೋಜನ ಪಡೆದು ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿದ್ದಿರಿ. ನೀವು ಆರೋಗ್ಯವಾಗಿ ಇದ್ದರೆ ಮಾತ್ರ ನಿಮ್ಮ ಕುಟುಂಬಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಯಾವುದೇ ರೋಗವನ್ನು ಇದ್ದರೂ ಅದರಿಂದ ಹೊರಬರುವ ಪ್ರಯತ್ನವನ್ನು ಮಾಡಬೇಕು. ಈ ಹಿನ್ನೆಲೆಯಲ್ಲಿ ಆರೋಗ್ಯ ಶಿಬಿರ ಮತ್ತು ಜಾಗೃತಿ ಮೇಳಗಳನ್ನು ಏರ್ಪಡಿಸಲಾಗಿದೆ ಎಲ್ಲಾ ತಾಲ್ಲೂಕುಗಳ ಜನ ಸಾಮಾನ್ಯರು ಇದರ ಸದುಪಯೋಗ ಪಡೆದುಕೊಂಡು ಶಿಬಿರವನ್ನು ಯಶಸ್ವಿ ಗೊಳಿಸಬೇಕು ಎಂದು ಹೇಳಿದರು.
ಇದೇ ವೇದಿಕೆಯಲ್ಲಿ ಆಯುಷ್ಮನ್ ಆರೋಗ್ಯ ಕರ್ನಾಟಕ ಕಾರ್ಡ್ ಸಹ ಉಚಿತವಾಗಿ ನೀಡುತ್ತಿದ್ದು, ಫಲಾನುಭವಿಗಳು ಪಡೆದುಕೊಳ್ಳಬೇಕು.ಎಲ್ಲರೂ ಆರೋಗ್ಯವಾಗಿದ್ದರೆ ಜಿಲ್ಲೆಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಾಧ್ಯ. ನಮ್ಮ ಜಿಲ್ಲೆಯು ಸದೃಢವಾಗಿ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಎನ್.ಧನಂಜಯ ಮಾತನಾಡಿ ಆರೋಗ್ಯ ಮೇಳದಲ್ಲಿ ಬಿಪಿ,ಶುಗರ್,ಇಸಿಜಿ ಪರೀಕ್ಷೆ ಗಳನ್ನುಬನಡೆಸಲಾಗುವುದು. ತಜ್ಞ ವೈದ್ಯರ ಸಲಹೆಯ ಜೊತೆಗೆ ಆಯುಷ್ಮಾನ್ ಕಾರ್ಡ್, ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ.ಆಯುಷ್ ಇಲಾಖೆ ನಮ್ಮೊಂದಿಗೆ ಕೈಜೋಡಿಸಿ ಆಯುಷ್ ಸೇವೆಯನ್ನು ಒದಗಿಸುತ್ತದೆ. ಆರೋಗ್ಯ ಮೇಳದಲ್ಲಿ ಸಾವಿರಾರು ಸಂಖ್ಯೆಯ ಸಾರ್ವಜನಿಕರಿಗೆ ಸಂಪೂರ್ಣವಾದ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ನ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಟಿ.ಹೆಚ್.ಒ ಡಾ.ಜವರೇಗೌಡ, ಆರ್.ಹೆಚ್.ಒ.ಡಾ.ಸೋಮಶೇಖರ್, ಮಾನಸಿಕ ರೋಗ ತಜ್ಞರಾದ ಡಾ.ಕೆ.ಪಿ.ಅಶ್ವಥ್,ತಜ್ಞ ವೈದ್ಯರಾದ ಡಾ.ಕೆ ಜಿ.ಭವಾನಿ ಶಂಕರ, ಡಾ. ಎಂ.ಎನ್.ಆಶಾಲತಾ, ಡಾ.ಪುಷ್ಪಲತಾ, ಡಾ.ಶಶಿಧರ್,ಡಾ.ಶಶಿಕಲಾ, ಡಾ.ಅರುಣಾ ನಂದ,ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.